ಕಡಬ: ಮದುವೆಯ ಮೊದಲೇ ಯುವತಿಯನ್ನು ಗರ್ಭಿಣಿಯನ್ನಾಗಿಸಿ, ನಂತರ ಮದುವೆಯಾಗಿ ನಿನಗೆ ಹುಟ್ಟಿದ ಮಗು ನನ್ನದಲ್ಲ , ನೀನು ವ್ಯಭಿಚಾರಿ ಎಂದು ನಿಂದಿಸಿ, ವರದಕ್ಷಿಣೆ ಕಿರುಕುಳ ನೀಡಿದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತ ಯುವಕನನ್ನು ದೀಕ್ಷಿತ್ ಎಂದು ಗುರುತಿಸಲಾಗಿದೆ. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಯುವತಿಯೋರ್ವಳ ಸಂಬಂಧಿ ದೀಕ್ಷಿತ್ ಆಗಾಗ ಮನೆಗೆ ಬರುತ್ತಿದ್ದ . ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿದೆ. ಮುಂದೆ ಹೇಗೂ ಮದುವೆಯಾಗಲಿದ್ದೇವೆ ಎಂದು ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಆತ ದೂರದೂರಿಗೆ ಕೆಲಸದ ನಿಮಿತ್ತ ತೆರಳಿದ್ದಾನೆ. ಪರಿಣಾಮ ಯುವತಿ ಗರ್ಭಾವತಿಯಾಗಿದ್ದಾಳೆ. ಗರ್ಭಿಣಿಯಾದ ವಿಷಯ ಇಬ್ಬರ ಮನೆಯವರಿಗೆ ತಿಳಿದು ವಿವಾಹ ಮಾಡಲು ನಿರ್ಧರಿಸಿರುತ್ತಾರೆ. ಆಗ ದೀಕ್ಷಿತ್ ಆಕೆ ಗರ್ಭ ಧರಿಸಲು ತಾನೇ ಕಾರಣ ಹಾಗೂ ಆಕೆಯನ್ನು ವಿವಾಹವಾಗುತ್ತೆನೆ ಎಂದು ಒಪ್ಪಿ ಸ್ಥಳೀಯ ಆಶಾ ಕಾರ್ಯಕರ್ತೆಯರಿಗೆ ಬರವಣಿಗೆ ಮುಖಾಂತರ ಪತ್ರಕ್ಕೆ ಸಹಿ ಮಾಡಿದ್ದ.
2021ರ ಆ.05 ರಂದು ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇದಾದ ನಂತರ 2021ರ ನ.15ರಂದು ದೀಕ್ಷಿತ್ ಊರಿಗೆ ಬಂದು ಯುವತಿಯ ಮನೆಯವರೊಂದಿಗೆ ಮಾತುಕತೆಯಂತೆ ಪುತ್ತೂರು ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ವಿವಾಹವಾಗಿದ್ದಾನೆ. ಮದುವೆಯಾದ ದಿನವೇ ದೀಕ್ಷಿತ್ ಮರಳಿ ಕರ್ತವ್ಯಕ್ಕೆ ತೆರಳಿದ್ದಾನೆ. ನಂತರದ ಆತ ದೂರವಾಣಿ ಕರೆ ಮಾಡಿ, ನಿನಗೆ ಹುಟ್ಟಿದ ಮಗು ನನದಲ್ಲ . ನೀನು ವ್ಯಭಿಚಾರಿ, ನಾನು ನಿನಗೆ ಡಿಎನ್ಎ ಟೆಸ್ಟ್ ಮಾಡಿಸುತ್ತೆನೆ, ನಿನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ನಿಂದಿಸಿ ಕಿರುಕುಳ ನೀಡಿದ್ದಲ್ಲದೆ ವರದಕ್ಷೀಣೆ ತರಬೇಕು ಎಂದು ಹಿಂಸೆ ನೀಡಿದ್ದಾನೆ ಎಂದು ಕಡಬ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾಳೆ.