ಕಡಬ: ಹಣಕ್ಕೆ ಬೇಡಿಕೆಯಿಟ್ಟು ಸಹೋದರರನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿ, ಕೊಲೆ ಬೆದರಿಕೆಯೊಡ್ಡಿದ ಆರೋಪ ಕೇಳಿ ಬಂದಿದ್ದು ಈ ಘಟನೆ ಕಡಬ ತಾಲೂಕಿನ ಕೊಯಿಲಾ ಎಂಬಲ್ಲಿ ನಡೆದಿರುವುದಾಗಿ ತಿಳಿದು ಬಂದಿದೆ.
ಅಪಹರಣಕ್ಕೊಳಗಾದ ಸಹೋದರರಲ್ಲಿ ಓರ್ವ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಮತ್ತೋರ್ವ ಅಪಹರಣಕಾರ ಬಳಿಯೇ ಇರುವುದಾಗಿ ತಿಳಿದುಬಂದಿದೆ. ಕೊಯಿಲಾ ನಿವಾಸಿ ನಿಝಾಮ್ ಮತ್ತು ಶಾರೂಖ್ ಎಂಬವರನ್ನು ಜೆಸಿಬಿ ಎಂಬ ಪದದೊಂದಿಗೆ ಕರೆಯಲ್ಪಡುವ ವ್ಯಕ್ತಿಯೊಬ್ಬನ ತಂಡ ಅಪಹರಣ ಮಾಡಿರುವುದಾಗಿ ಆರೋಪಿಸಲಾಗಿದೆ.
10 ಲಕ್ಷ ನೀಡಿದರೆ ಮತ್ತೋರ್ವನನ್ನು ಬಿಡುಗಡೆಗೊಳಿಸುತ್ತೇವೆ , ಇಲ್ಲದೇ ಹೋದಲ್ಲಿ ಕೊಲೆ ನಡೆಸಿ ನೀರಿಗೆ ಎಸೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಅಪರಿಚಿತರ ತಂಡ ಇಬ್ಬರನ್ನೂ ಮಂಗಳೂರಿನ ಮಲ್ಲೂರಿಗೆ ಕರೆದೊಯ್ದಿದ್ದರು ಎನ್ನಲಾಗಿದೆ. ಶಾರೂಖ್ ನ ಪ್ರಾಣ ಅಪಾಯದಲ್ಲಿದೆ ಎಂದು ನಿಝಾಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಘಟನೆ ಸಂಬಂಧಿಸಿದಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.