ಕಡಬ: 8 ವರ್ಷಗಳ ಹಿಂದೆ ಮದುವೆ ಆಗುವುದಾಗಿ ನಂಬಿಸಿ ವಂಚಿನೆಗೈದ ಪ್ರಕರಣವೊಂದಕ್ಕೆ ಸಂಬಂಧಿಸಿದ ಆರೋಪಿಗಳಾದ ಪ್ರದೀಪ್, ಶಿಬು, ಪ್ರಸಾದ್ ಪಿ.ಕೆ. ಮತ್ತು ರುಕ್ಮಿಣಿರವರನ್ನು ಪುತ್ತೂರಿನ ಎರಡನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಪನಗಾ ಎಂಬಲ್ಲಿಯ ಪ್ರ ದೀಪ್ ಎಂಬಾತ ಸುಮಿತ್ರ ಎಂಬವರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದ ಪ್ರಕರಣ ಇದಾಗಿದೆ.
ಪ್ರಕರಣದ ಮೊದಲನೇ ಆರೋಪಿ ಪ್ರದೀಪ್ ಅವರು ಇತರ ಆರೋಪಿಗಳಾದ ಪ್ರದೀಪ್ ಅವರ ಅಣ್ಣ ಪ್ರಸಾದ್ ಪಿ.ಕೆ, ತಾಯಿ ರುಕ್ಮಿಣಿ ಹಾಗೂ ಭಾವ ಶಿಬುರವರು ದಿನಾಂಕ 27/12/2012ರಂದು ಸುಮಿತ್ರ ರವರ ಮನೆಗೆ ಬಂದು ಸುಮಾರು 200 ಜನರ ಸಮಕ್ಷಮ ಉಂಗುರ ಬದಲಾಯಿಸಿ ನಿಶ್ಚಿತಾರ್ಥ ನಡೆಸಿ ವಿವಾಹವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಸ್ಥಾನದ ಸರಸ್ವತಿ ಮಂಟಪದಲ್ಲಿ ದಿನಾಂಕ 12/05/2013ರಂದು ಮಧ್ಯಾ ಹ್ನ 12:30ಕ್ಕೆ ಕರ್ಕಾಟಕ ಲಗ್ನದಲ್ಲಿ ನಡೆಸುವುದಾಗಿ ನಿರ್ಧರಿಸಿದ್ದರು.
ಅದರಂತೆ ಸುಮಿತ್ರ ಮತ್ತು ಅವರ ಮನೆಯವರು ಮದುವೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ ಸಂಬಂಧಿಕರಿಗೆ ಹಾಗೂ ನೆರೆಕರೆಯವರಿಗೆ ಹಂಚಿದ್ದರು. ಆ ಬಳಿಕ ಆರೋಪಿಗಳು ಮದುವೆಗೆ ಒಪ್ಪದೇ ಸುಮಿತ್ರ ಮತ್ತು ಅವರ ಮನೆಯವರಿಗೆ ಸರಿಯಾಗಿ ಮಾತುಕತೆಗೂ ಸಿಕ್ಕಿರಲಿಲ್ಲ.
ಆರೋಪಿ ಪ್ರದೀಪ್ ತಾನು ಕೆಲಸ ಮಾಡುತ್ತಿದ್ದ ಮಲಬಾರ್ ಗೋಲ್ಡ್ ಶಾಖೆ ಮಂಗಳೂರಿನಿಂದ ಬೆಂಗಳೂರಿಗೆ ವರ್ಗಾವಣೆ ಪಡೆದು ಹೋಗಿದ್ದಲ್ಲದೆ ಆರೋಪಿತರೆಲ್ಲರೂ 1ನೇ ಆರೋಪಿಯೊಂದಿಗೆ ಸುಮಿತ್ರರವರನ್ನು ಮದುವೆ ಮಾಡಿಕೊಡುವುದಾಗಿ ನಂಬಿಸಿ ಆ ಬಳಿಕ ಮದುವೆಯಾಗದೇ ಮದುವೆಗೆ ನಿರಾಕರಿಸಿ ಮೋಸ ಮಾಡಿದ್ದಾರೆ ಎಂದು ಕಡಬ ಪೊಲೀಸ್ ಠಾಣೆಯಲ್ಲಿ ಸುಮಿತ್ರ ದೂರು ನೀಡಿದ್ದರು.
ಪ್ರಕರಣದ ಬಗ್ಗೆ ಕಡಬ ಪೊಲೀಸರು ಪ್ರಥಮ ವರ್ತಮಾನ ವರದಿ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ನ್ಯಾಯಾಲಯ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡು ಸುಮಾರು 13 ಸಾಕ್ಷಿಗಳ ಪೈಕಿ 12 ಸಾಕ್ಷಿಗಳನ್ನು ತನಿಖೆ ನಡೆಸಿತ್ತು. 10 ಪ್ರಾಸಿಕ್ಯೂಷನ್ ಪರ ದಾಖಲೆಗಳನ್ನು ಹಾಜರು ಪಡಿಸಲಾಗಿತ್ತು .
ಅಂತಿಮವಾಗಿ ಉಭಯ ಪಕ್ಷಗಾರರ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶ ವೆಂಕಟೇಶ್ ಎನ್.ಅವರು ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಭೀತುಪಡಿಸಲು ವಿಫಲಗೊಂಡಿದೆ ಎಂದು ತೀರ್ಮಾನಿಸಿ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಗಳ ಪರ ವಕೀಲ ಮಹೇಶ್ ಕಜೆ ವಾದಿಸಿದ್ದರು.