ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆದರೆ ಮುಗೀತು. ಅದಕ್ಕೆ ಬೇರೆ ಸರ್ಟಿಫಿಕೇಟ್ ಬೇಕಿಲ್ಲ. ಕನ್ನಡ ಚಿತ್ರರಂಗಕ್ಕೂ ಕಳೆದ ಎರಡು ವರ್ಷಗಳಿಂದ ಶುಕ್ರದೆಸೆ ಬಂದಿದೆ. ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆಯುವಂತಹ ಸಿನಿಮಾ ರಿಲೀಸ್ ಆಗಿವೆ. ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿವೆ. ಬಾಕ್ಸಾಫೀಸ್ ಜೊತೆಗೆ ಮತ್ತೆ ಕೆಲವು ಸಿನಿಮಾಗಳು ವಿಶ್ವದಾದ್ಯಂತ ಗಮನ ಸೆಳೆದಿವೆ. ನಿನ್ನೆಯಷ್ಟೇ (ಸೆಪ್ಟೆಂಬರ್ 30) ತೆರೆಕಂಡ ‘ಕಾಂತಾರ’ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲದೆ ಹೋದರೂ, ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಇದೇ ರೀತಿ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ನಿರ್ದೇಶನ ‘ಗರುಡ ಗಮನ ವೃಷಭ ವಾಹನ’ ಕೂಡ ಯಶಸ್ಸು ಕಂಡಿತ್ತು.
ಕಾಂತಾರ’ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ಸಿನಿಮಾ. ಈಗಾಗಲೇ ತೆರೆಕಂಡು ಪ್ರೇಕ್ಷಕರಿಗೆ ಕಿಕ್ ಕೊಡುತ್ತಿದೆ. ವಿಶೇಷ ಅಂದ್ರೆ, ಗರುಡ ಗಮನ ಸಿನಿಮಾದಲ್ಲಿ ಹರಿಯಾಗಿದ್ದ ರಿಷಬ್ ಶೆಟ್ಟಿ ಇಲ್ಲಿ ಶಿವ. ‘ಕಾಂತಾರ’ ಶಿವನಿಗೂ ಗರುಡ ಗಮನ ವೃಷಭ ವಾಹನ’ ಶಿವನಿಗೂ ಕಿಂಚಿತ್ತೂ ಸಾಮ್ಯತೆಯಿಲ್ಲ. ಈ ಶಿವನಿಗೂ ಪ್ರೇಕ್ಷಕರು ಬಹುಪರಾಕ್ ಹೇಳುತ್ತಿದ್ದಾರೆ.
ಈ ಸಿನಿಮಾ ಸಾಂಪ್ರದಾಯಿಕ ಆಚರಣೆಗಳು ಮತ್ತು ಅರಣ್ಯ ಅಧಿಕಾರಿಗಳ ಸ್ಥಳೀಯರ ನಡುವಿನ ಸಂಘರ್ಷವನ್ನು ಕೇಂದ್ರೀಕರಿಸುತ್ತದೆ. ಕರಾವಳಿಯ ದೈವ ಭಕ್ತಿಯನ್ನು ಜಗತ್ತಿಗೆ ಪರಿಚಯಿಸುವ ಸಿನಿಮಾ ಎನ್ನಬಹುದು. ಕರಾವಳಿ ಕರ್ನಾಟಕ ಸಂಸ್ಕೃತಿಯಲ್ಲಿ ಹೆಚ್ಚು ಆಳವಾಗಿ ಬೇರೂರಿದೆ ಎಂಬ ಕಾರಣಕ್ಕಾಗಿ ಚಿತ್ರವು ಇತರ ಭಾಷೆಗಳಿಗೆ ಡಬ್ ಮಾಡದಿರಲು ಚಿತ್ರತಂಡ ನಿರ್ಧರಿಸಿದೆ. ನಿರ್ದೇಶಕ ರಿಷಬ್ ಈ ಬಾರಿ ಮೇಕಿಂಗ್ಗೆ ಜಾಸ್ತಿ ಪ್ರಾಶಸ್ತ್ಯ ನೀಡಿದ್ದಾರೆ. ಚಿತ್ರದ ಪ್ರತಿ ಫ್ರೇಮ್ ಸುಂದರವಾಗಿಸಿದ್ದಾರೆ. ಕೆಲವು ಸನ್ನಿವೇಶಗಳಲ್ಲಿ ಕಥೆಯ ಆಶಯಕ್ಕಿಂತಲೂ ಮೇಕಿಂಗ್ ಹೈಲೈಟ್ ಎನಿಸಿಕೊಳ್ಳುತ್ತದೆ. ನಾಯಕನನ್ನು ಕಂಡರೆ ಸಿಡುಕುವ ನಾಯಕಿ, ಒಂದೇ ದೃಶ್ಯದಲ್ಲಿ ಪ್ರೀತಿಯಲ್ಲಿ ಬೀಳುವುದು ನಾಟಕೀಯ ಭಾವ ಮೂಡಿಸುತ್ತದೆ. ಮುಂದೇನಾಗಬಹುದು ಎಂದು ಕೆಲವೊಮ್ಮೆ ಊಹಿಸಬಹುದು, ಆದರೆ ಅಂಥ ದೃಶ್ಯಗಳನ್ನೂ ಕೂಡ ರಮಣೀಯವಾಗಿ ಚಿತ್ರಿಸಿ, ರಿಷಬ್ ಬೆರಗು ಮೂಡಿಸುತ್ತಾರೆ. ಜಾತಿ ಪದ್ಧತಿ ಬಗ್ಗೆಯೂ ‘ಕಾಂತಾರ’ ಮಾತನಾಡುತ್ತದೆ.
ನಿಜಕ್ಕೂ ನಟನಾಗಿ ರಿಷಬ್ ಶೆಟ್ಟಿ ಈ ಸಿನಿಮಾದಲ್ಲಿ ಅಚ್ಚರಿಯನ್ನೇ ನೀಡಿದ್ದಾರೆ. ರಿಷಬ್ ನಟನೆಯ ಸಿನಿಮಾಗಳಲ್ಲಿ ಹಾಸ್ಯವೇ ಹೈಲೈಟ್ ಆಗಿರುತ್ತದೆ. ಆದರೆ ಈ ಸಿನಿಮಾದಲ್ಲಿ ಆಂಗ್ರಿಯಂಗ್ಮ್ಯಾನ್ ಲುಕ್ನಲ್ಲಿ ಹೊಸ ಥರದ ಪಾತ್ರಕ್ಕೆ ಸಮರ್ಥವಾಗಿ ಜೀವ ತುಂಬಿದ್ದಾರೆ. ಹಾಗೆಯೇ, ಕೊನೆಯ 20 ನಿಮಿಷ ಯಾರೂ ಊಹಿಸಲಾರದಂತಹ ನಟನೆಯನ್ನು ಮಾಡಿದ್ದಾರೆ. ಕೊನೆಯಲ್ಲಿ ಹಲವಾರು ಸಂದೇಶದೊಂದಿಗೆ ಮುಕ್ತಾಯ ಹಾಗೇ ಪ್ರೇಕ್ಷಕರ ಚಿಂತನೆ ಯಾವ ರೀತಿ ಇದೆಯೋ ಹಾಗೇ ಬೇರೆ ಬೇರೆ ರೀತಿಯ ಸಮಾಜದಲ್ಲಿ ನಡೆಯುವಂತಹ ತಪ್ಪು, ಸರಿ ಎಲ್ಲಾವನ್ನೂ ಭಿನ್ನವಾಗಿ ಕಥೆಯಲ್ಲಿ ಕಟ್ಟಿಕೊಡಲಾಗಿದೆ.