ಖಾಸಗಿ ಆಸ್ಟತ್ರೆಯನ್ನು ಮೀರಿಸುವ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡುತ್ತಿರುವ ಬೆಂಗಳೂರಿನ ಸರಕಾರಿ ಜಯದೇವ ಆಸ್ಪತ್ರೆ
ಓರ್ವ ಮನುಷ್ಯ ಮನಸ್ಸು ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಅನ್ನೋದು ಅದೆಷ್ಟೋ ಜನರಿಗೆ ಸರಕಾರಿ ಆಸ್ಪತ್ರೆ ಅನ್ನೋದನ್ನ ನಂಬೋದಕ್ಕೆ ಆಗ್ತಾ ಇಲ್ಲಾ.. ಯಾಕಂದ್ರೆ ಅಷ್ಟರ ಮಟ್ಟಿಗೆ ಮೇಲ್ದರ್ಜೆಗೇರಿದೆ. ಖಾಸಗಿ ಆಸ್ಟತ್ರೆಯಲ್ಲಿ ಸಿಗುವಂತಹ ಗುಣಮಟ್ಟದ ಚಿಕಿತ್ಸೆಗಿಂತ ಒಂದು ಕೈ ಮೇಲಿನ ಗುಣಮಟ್ಟದ ಚಿಕಿತ್ಸೆ ಜಯದೇವ ಆಸ್ಟತ್ರೆಯಲ್ಲಿ ಸಿಗುತ್ತಾ ಇದೆ. ಎಷ್ಟೋ ಜನರಿಗೆ ಈ ಕ್ಷಣಕ್ಕೂ ಕೂಡ ಸರಕಾರಿ ಆಸ್ಪತ್ರೆ ಅನ್ನೋದನ್ನ ನಂಬೋಕೆ ಸಾಧ್ಯವಾಗ್ತಾ ಇಲ್ಲ. ಈ ಆಸ್ಪತ್ರೆ ಈ ಮಟ್ಟಕ್ಕೆ ಬೆಳೆಯಲು ಕಾರಣ ಯಾರು ಅಂತೀರಾ ಇವರೇ ಮಹಾನ್ ಸಾಧಕ ಡಾ. ಸಿ.ಎನ್ ಮಂಜುನಾಥ್.
ಮಂಜುನಾಥ್ ಚೋಳೇನಹಳ್ಳಿ ನಂಜಪ್ಪ ಮಂಜುನಾಥ್ ಎಂಬ ಪೂರ್ಣ ಹೆಸರಿನ 62 ವರ್ಷದ ಡಾ.ಸಿ.ಎನ್.ಮಂಜುನಾಥ್ರವರು ಜನಿಸಿದ್ದು ಜುಲೈ 20, 1957 ರಂದು. ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಜನಿಸಿದ ಇವರು ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದರು. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಎಂ.ಡಿ, ಮಂಗಳೂರು ಕಸ್ತೂರ ಬಾ ವೈದ್ಯಕೀಯ ಕಾಲೇಜಿನಲ್ಲಿ ಹೃದಯಶಾಸ್ತ್ರದಲ್ಲಿ ಡಿ.ಎಮ್ ಪಡೆದ ಡಾ.ಸಿ.ಎನ್.ಮಂಜುನಾಥ್ 1982ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಇಂಟರ್ನ್ ಆಗಿ ವೃತ್ತಿಜೀವನ ಆರಂಭಿಸಿದರು.
ಮಾನವೀಯತೆ ಇಲ್ಲದ ಜ್ಞಾನ, ವಿಜ್ಞಾನ-ತಂತ್ರಜ್ಞಾನ-ಇದ್ದರೆಷ್ಟು, ಬಿಟ್ಟರೆಷ್ಟು ಎಂಬುದನ್ನು ಬಲವಾಗಿ ನಂಬಿರುವ ಗಾಂಧಿವಾದಿ. ವೈದ್ಯರು, ಪ್ರಾಧ್ಯಾಪಕರು ತಮ್ಮ ವೃತ್ತಿಯಲ್ಲಿ ಪರಿಣಿತಿ ಪಡೆಯುವುದರ ಜತೆಗೆ, ಆಡಳಿತದಲ್ಲೂ ಕೌಶಲ ಹೊಂದಿರಬೇಕು ಎಂಬ ನಂಬಿಕೆಯ ಆಧುನಿಕವಾದಿ ಕರ್ನಾಟಕ ವೈದ್ಯಕೀಯ ಲೋಕದ ಅನೂಹ್ಯ ಸಾಧಕ ಡಾ. ಸಿ.ಎನ್ ಮಂಜುನಾಥ್ರವರು.
ಈ ಎರಡು ವಾದಗಳು ಅನುಷ್ಠಾನದ ಹಾದಿ ಹಿಡಿದ ಫಲವೇ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ. ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ ಸುಮಾರು ಹೃದ್ರೋಗ ತಜ್ಞರಾಗಿ ಸುಮಾರು 12 ವರ್ಷಗಳಲ್ಲಿ 50 ಲಕ್ಷ ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ , 4 ಸಾವಿರಕ್ಕೂ ಅಧಿಕ ಮಂದಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಪೂರೈಸಿ ಈಗಲೂ ಪ್ರತಿ ದಿನ 1700 ರೋಗಿಗಳ ತಪಾಸಣೆ ನಡೆಸುವ ಜಯದೇವ ಆಸ್ಪತ್ರೆ ಇಂದು ಜಗತ್ಪçಸಿದ್ದ. ಪ್ರತಿ ದಿನವೂ ಇಲ್ಲಿ 80ರಿಂದ 100 ಆಂಜಿಯೋಪ್ಲಾಸ್ಟಿ, 15 ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಯುತ್ತಲೇ ಇದೆ. ಆಸ್ಪತ್ರೆಯ ಆದಾಯ ಮತ್ತು ದೇಣಿಗೆಯಲ್ಲೆ ನಿರ್ಗತಿಕರಿಗೂ ಲಕ್ಷ ರೂ.ವೆಚ್ಚದ ಶಸ್ತ್ರ ಚಿಕಿತ್ಸೆಯನ್ನು ಬಡಜನರು ಉಚಿತವಾಗಿ ಪಡೆಯುತ್ತಾರೆ. ಅದಕ್ಕಾಗಿ 50 ಕೋಟಿ ರೂ. ಸ್ಥಾಯಿ ನಿಧಿ ಇಲ್ಲಿ ಇದೆ. 2018ರಲ್ಲಿ ದೇಶದ ಹತ್ತು ಪ್ರಮುಖ ಆಸ್ಪತ್ರೆಗಳಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆ ಮೊದಲ ಸ್ಥಾನದಲ್ಲಿದೆ. ಇಷ್ಟೆಲ್ಲಾ ಸಾಧನೆಗಳ ಹಿಂದಿರುವುದು ನಿಸ್ಸಂದೇಹವಾಗಿ ಡಾ. ಸಿ.ಎನ್ ಮಂಜುನಾಥ್ ಅವರ ತಪಸ್ಸು.
ಹಳ್ಳಿಯ ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿ, ಕನ್ನಡ ಮಾಧ್ಯಮದಲ್ಲಿ ಕಲಿತ ಇವರು ತಮ್ಮ ನಿರಂತರ ಪರಿಶ್ರಮ, ಪ್ರತಿಭೆ, ಬದ್ಧತೆ, ಸಾಮಾಜಿಕ ಕಳಕಳಿಯಿಂದ ಅಸಾಧ್ಯವಾದುದನ್ನು ಸಾಧಿಸಿದ್ದಾರೆ.
ಡಾ.ಸಿ.ಎನ್. ಮಂಜುನಾಥ್ ಅವರ ಸಾಧನೆಗಳು
5,27,437 ಹೊರ ರೋಗಿಗಳನ್ನು ನೋಡಿದ್ದಾರೆ, 53,806 ರಲ್ಲಿ – 30,000 ರೋಗಿಗಳಿಗೆ ಸಬ್ಸಿಡಿ ವೆಚ್ಚವಾಗಿ ಚಿಕಿತ್ಸೆ ನೀಡಲಾಗಿದೆ, 42,865 ಕ್ಯಾಥ್ ಲ್ಯಾಬ್ ಕಾರ್ಯವಿಧಾನ, 24,447 ಆಂಜಿಯೋಗ್ರಾಮ್ಗಳು, ಜಗತ್ತಿನಲ್ಲಿ ಅತಿ ಹೆಚ್ಚು ಸುಮಾರು 1500 ಮಿಟ್ರಲ್ ವಾಲ್ವುಲೋಪ್ಲ್ಯಾಸ್ಟಿಗಳು, ದೇಶದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ 15,000 ಆಂಜಿಯೋಪ್ಲ್ಯಾಸ್ಟಿಗಳು, 3,000 ಬೈಪಾಸ್ ಮತ್ತು ವಾಲ್ವ್ ರಿಪ್ಲೇಸ್ಮೆಂಟ್ ಸರ್ಜರಿಗಳು, 3,00,054 ಎಕೋ – ಕಾರ್ಡಿಯೋಗ್ರಾಮ್ಗಳು, ಬಡ ರೋಗಿಗಳ ಕಾರ್ಪಸ್ ನಿಧಿ ರಚನೆಗಾಗಿ ವಿವಿಧೆಡೆಯಿಂದ 100 ಕೋಟಿ ರೂ ಸಂಗ್ರಹ.
ಡಾ. ಮಂಜುನಾಥ್ ಅವರು ಸಲ್ಲಿಸುತ್ತಿರುವ ನಿಸ್ವಾರ್ಥಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪ್ರಾಶಸ್ತಿ ನೀಡಿದೆ. ರಾಜೀವಗಾಂಧೀ ಅರೋಗ್ಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಇವರ ಸೇವೆಗೆ ಮುಕುಟಪ್ರಾಯವೆನ್ನುವಂತೆ ದೇಶದ ಪದ್ಮಶ್ರೀ ಪ್ರಶಸ್ತಿಯು ಇವರಿಗೆ ಸಂದಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.