ಉತ್ತರಾಖಂಡ್ನಲ್ಲಿ ಫೆ.14ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಲ್ಲಿ ಪ್ರಚಾರ ಸಭೆ ನಡೆಸಿದರು. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಮಂತ್ರಿ ಮೋದಿ, ವಿರೋಧ ಪಕ್ಷ ಕಾಂಗ್ರೆಸ್ ಭಾರತವನ್ನು ಒಂದು ರಾಷ್ಟ್ರವನ್ನಾಗಿ ಪರಿಗಣಿಸಲೂ ಸಿದ್ಧವಿಲ್ಲ ಎಂದು ಹೇಳಿದ್ದಾರೆ. ಈ ಭಾರತವೆಂಬ ರಾಷ್ಟ್ರ ಒಂದೇ. ಆದರೆ ಕಾಂಗ್ರೆಸ್ ಭಾರತವನ್ನು ರಾಷ್ಟ್ರವೆಂದು ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಿದ ಅವರು, ನಮ್ಮ ಬಿಜೆಪಿ ಸರ್ಕಾರ ಈ ಉತ್ತರಾಖಂಡ್ ದೇವಭೂಮಿಯ ದೈವತ್ವವನ್ನು ಸದಾ ಕಾಪಾಡುತ್ತದೆ ಎಂದು ಹೇಳಿದರು.
ಉತ್ತರಾಖಂಡ್ನ ರುದ್ರಪುರದಲ್ಲಿ ರ್ಯಾಲಿ ನಡೆಸಿದ ಪ್ರಧಾನಿ ಮೋದಿ, ಕೊವಿಡ್ 19 ಪರಿಸ್ಥಿತಿಯಲ್ಲಿ ಉತ್ತರಾಖಂಡ್ ಸರ್ಕಾರ ಬಡಜನರಿಗೆ ಉಚಿತ ಪಡಿತರ ನೀಡಿದೆ. ಅಷ್ಟೇ ಅಲ್ಲ, ಇನ್ನಿತರ ಯೋಜನೆಗಳ ಮೂಲಕ ಅವರಿಗೆ ಸೌಕರ್ಯಗಳನ್ನು ಒದಗಿಸಿದೆ. ಅದೇ ಏನಾದರೂ ಕಾಂಗ್ರೆಸ್ ಸರ್ಕಾರವಿದ್ದರೆ ಪರಿಸ್ಥಿತಿ ಬೇರೆಯೇ ಇರುತ್ತಿತ್ತು.ಭ್ರಷ್ಟಾಚಾರವೆಂಬುದು ಪ್ರತಿ ಹಂತದಲ್ಲೂ ತಾಂಡವವಾಡುತ್ತಿತ್ತು ಎಂದು ಹೇಳಿದ್ದಾರೆ. ಉತ್ತರಾಖಂಡ್ ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡಿದೆ. ಕೊವಿಡ್ 19ನಿಂದ ಉಂಟಾಗಿದ್ದ ಸವಾಲಿನ ಸಂದರ್ಭದಲ್ಲೂ ಉತ್ತರಾಖಂಡ್ನಲ್ಲಿ ನಾವು ಹೆದ್ದಾರಿಗಳನ್ನು ನಿರ್ಮಿಸಿದ್ದೇವೆ, ಏರ್ಪೋರ್ಟ್ ಕಟ್ಟಿದ್ದೇವೆ. ಇನ್ನು ಮುಂದೆ ಕೂಡ ಪರ್ವತ್ ಮಾಲಾ ಯೋಜನೆಯಡಿ, ಉತ್ತರಾಖಂಡ್ನ ದುರ್ಗಮ ಪ್ರದೇಶಗಳಿಗೆ ರೋಪ್ವೇ ಸೌಲಭ್ಯ ಕಲ್ಪಿಸಲಾಗುವುದು. ಅಷ್ಟೇ ಅಲ್ಲ, ವೈದ್ಯಕೀಯ ಕಾಲೇಜುಗಳು, ಪದವಿ ಕಾಲೇಜುಗಳನ್ನೂ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇಲ್ಲಿ ಅನೇಕ ಬಂಗಾಳಿ ಕುಟುಂಬಗಳು ವಾಸಿಸುತ್ತಿವೆ. ಹೀಗೆ ಪುನರ್ವಸತಿ ಪಡೆದ ಬಂಗಾಳಿಗಳ ಜಾತಿ ಪ್ರಮಾಣ ಪತ್ರದಿಂದ ಪೂರ್ವಿ ಪಾಕಿಸ್ತಾನ ಎಂಬ ಉಲ್ಲೇಖವನ್ನು ತೆಗೆದು ಹಾಕಿದ್ದಕ್ಕಾಗಿ ಇಲ್ಲಿನ ಸಿಎಂ ಪುಷ್ಕರ್ ಸಿಂಗ್ ಧಮಿಯವರನ್ನು ನಾನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.