ಚಿತ್ರಮಂದಿರದಲ್ಲಿ ಕುಳಿತು ಕೊಳ್ಳುವ ವಿಚಾರಕ್ಕೆ ನಟ, ಸಂಗೀತ ಸಂಯೋಜಕ ವಾಸುಕಿ ವೈಭವ್ ಹಾಗೂ ಅವರ ಗೆಳೆಯರ ಜೊತೆ, ಸಿನಿಮಾ ನೋಡಲು ಬಂದ ಯುವಕರ ಗುಂಪು ಅನುಚಿತವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗಾಯಕ ವಾಸುಕಿ ವೈಭವ್, ನಿರ್ದೇಶಕ ಪನ್ನಗಾಭರಣ, ದರ್ಶನ್ ಗೌಡ ಹಾಗೂ ಸ್ನೇಹಿತರು ಸೋಮವಾರ ಇತ್ತೀಚಿಗೆ ತೆರೆಕಂಡ ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ‘ಕಾಂತಾರ’ ಚಿತ್ರ ವೀಕ್ಷಿಸಲು ಬೆಂಗಳೂರಿನ ಊರ್ವಶಿ ಚಿತ್ರಮಂದಿರಕ್ಕೆ ತೆರಳಿದ್ದಾರೆ. ಈ ವೇಳೆ ಗಲಾಟೆ ನಡೆದಿದೆ ಎಂದು ವರದಿಯಾಗಿದೆ.
ವಾಸುಕಿ ವೈಭವ್, ಪನ್ನಗಾಭರಣ ಹಾಗೂ ದರ್ಶನ್ ಟಿಕೆಟ್ ತೆಗೆದುಕೊಂಡು ಮೊದಲೇ ಸೀಟ್ನಲ್ಲಿ ಹೋಗಿ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಬಸವರಾಜ್, ಮುರುಳಿ ಹಾಗೂ ಮತ್ತಿಬ್ಬರು ಸ್ನೇಹಿತರು ಚಿತ್ರಮಂದಿರದಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ತಗಾದೆ ತೆಗೆದಿದ್ದಾರೆ. ಈ ವೇಳೆ ಎರಡು ಗುಂಪನ ನಡುವೆ ಮನಸ್ತಾಪ ನಡೆದಿದೆ. ಅದಾಗಲೇ ಸಿನಿಮಾ ಆರಂಭವಾದ ಕಾರಣ ಬಸವರಾಜ್ ಹಾಗೂ ಮುರುಳಿ, ವಾಸುಕಿ ವೈಭವ್ ಹಾಗೂ ಪನ್ನಗಾಭರಣ ಕುಳಿತಿದ್ದ ಮುಂದಿನ ಸೀಟ್ನಲ್ಲಿ ಕುಳಿತುಕೊಳ್ಳುತ್ತಾರೆ.
ಬಳಿಕ ಸಿನಿಮಾ ಮಧ್ಯಂತರದಲ್ಲಿ ಬಸವರಾಜ್ ಹಾಗೂ ಮುರುಳಿ ಮತ್ತೆ ಕಿರಿಕ್ ಮಾಡಿದ್ದು, ವಾಸುಕಿ ವೈಭವ್ ಹಾಗೂ ಸ್ನೇಹಿತರನ್ನು ಗುರಾಯಿಸಿದ್ದಾರೆ. ಈ ವೇಳೆ ಮತ್ತೆ ಗಲಾಟೆ ನಡೆದಿದ್ದು, ಬಸವರಾಜ್ ಹಾಗೂ ಮುರುಳಿ, ವಾಸುಕಿ ವೈಭವ್ ಹಾಗೂ ಸ್ನೇಹಿತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕೂಡಲೇ ವಾಸುಕಿ ವೈಭವ್ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ನಡೆದ ಘಟನೆಯನ್ನು ವಿವರಿಸಿದ್ದಾರೆ.
ತಕ್ಷಣವೇ ಕಲಾಸಿಪಾಳ್ಯ ಪೊಲೀಸರು ಊರ್ವಶಿ ಚಿತ್ರಮಂದಿರಕ್ಕೆ ಆಗಮಿಸಿದ್ದು, ಬಸವರಾಜ್ ಮತ್ತು ಮುರುಳಿ ಹಾಗೂ ವಾಸುಕಿ ವೈಭವ್ ಹಾಗೂ ಸ್ನೇಹಿತರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಎರಡೂ ಗುಂಪುಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಪೊಲೀಸರು ದೂರು ದಾಖಲಿಸಿದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸುತ್ತಾರೆ. ಗಾಯಕ ವಾಸುಕಿ ವೈಭವ್ ಹಾಗೂ ನಿರ್ದೇಶಕ ಪನ್ನಗಾಭರಣ ಕೇಸ್ ದಾಖಲಿಸುವುದು ಬೇಡ ನಮ್ಮ ಬಳಿ ಕ್ಷಮೆ ಕೇಳಿದರೆ ಸಾಕು ಎಂದಿದ್ದಾರೆ. ಪೊಲೀಸರೆದುರು ತಮ್ಮ ತಪ್ಪು ಒಪ್ಪಿಕೊಂಡ ಬಸವರಾಜ್ ಮತ್ತು ಮುರುಳಿ, ವಾಸುಕಿ ವೈಭವ್ ಅವರ ಬಳಿ ಕ್ಷಮೆ ಕೇಳಿದ್ದಾರೆ. ಆದರೆ ವಾಸುಕಿ ವೈಭವ್ ಅವರ ಮತ್ತೋರ್ವ ಸ್ನೇಹಿತ ದರ್ಶನ್ ಗೌಡ, ಅವರಿಬ್ಬರು ನಮ್ಮ ಬಳಿಕ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದರ್ಶನ್ ಗೌಡ ದೂರಿನ್ವಯ ಪ್ರಕರಣ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿದ್ದು, ವಿಚಾರಣೆ ನಡೆಸಿದ ಪೊಲೀಸರು, ಎರಡೂ ಗುಂಪಿನ ನಡುವೆ ಸಂಧಾನ ಮಾಡಿ ಕಳುಹಿಸಿದ್ದಾರೆ. ಕ್ಷಮೆ ಕೇಳುವುದರೊಂದಿಗೆ ಪ್ರಕರಣ ಸುಖಾಂತ್ಯ ಕಂಡಿದೆ ಎನ್ನಲಾಗಿದೆ.