ಕಾಪು : ಮದುವೆ ಕಾರ್ಯಕ್ರಮಕ್ಕೆ ಹೋಗಲೆಂದು ಕಾರು ಪಡೆದು ವಾಪಸ್ಸು ನೀಡದೆ ವಂಚಿಸಿರುವುದಾಗಿ ಕಾಪುವಿನ ಮೂಡಬೆಟ್ಟು ಗ್ರಾಮದ ಪ್ರಾನ್ಸಿಸ್ ಕಿರಣ ಲಸ್ರಾದೊ ಎಂಬವರು ತಮ್ಮ ಸ್ನೇಹಿತ ಅಮಿರ್ ಸಾಹೇಬ್ ಎಂಬಾತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಾನ್ಸಿಸ್ ಕಿರಣ ಲಸ್ರಾದೊ ತಮ್ಮ ಕಾರನ್ನು ಸ್ನೇಹಿತ ಅಮೀರ ಸಾಹೇಬ್ ಎಂಬಾತನಿಗೆ ಆಗಾಗ ನೀಡುತ್ತಿದ್ದರು. ಅದರಂತೆ ಆರೋಪಿಯು ಮದುವೆ ಕಾರ್ಯಕ್ಕೆ ಹಾಜರಾಗಲು ಒಂದು ತಿಂಗಳ ಕಾಲ ಬಳಕೆಗಾಗಿ ಕಾರನ್ನು ಪಡೆದುಕೊಂಡಿದ್ದ. ಒಂದು ತಿಂಗಳ ನಂತರ ಕಾರಿನ ಬಗ್ಗೆ ವಿಚಾರಿಸಿದಾಗ, ಆರೋಪಿಯು ಸ್ವಲ್ಪ ಹಣವನ್ನು ನೀಡಿ, ಮುಂಬೈಗೆ ಹೋಗಲು ಕಾರಿನ ಅಗತ್ಯವಿರುವುದಾಗಿ ತಿಳಿಸಿದ್ದಾನೆ.
ಅದರಂತೆ ಆರೋಪಿಗೆ ಕಾರು ಬಿಟ್ಟುಕೊಟ್ಟಿದ್ದು, ಆರೋಪಿಯು ಮುಂಬೈನಿಂದ ಬಂದ ನಂತರ ಪ್ರಾನ್ಸಿಸ್ ಕಿರಣ ಲಸ್ರಾದೊ ಅವರನ್ನು ಸಂಪರ್ಕವು ಮಾಡದೇ ಕಾರು ಸಹ ಹಿಂತಿರುಗಿಸಿಲ್ಲ. ಈ ಬಗ್ಗೆ ವಿಚಾರಿಸಿದಾಗ ಒಂದಲ್ಲ ಒಂದು ಕಾರಣ ನೀಡುತ್ತಿದ್ದು, ಕಾರನ್ನು ನೀಡದೆ, ಬಳಸಿದ ಹಣವನ್ನು ನೀಡದೇ ವಂಚಿಸಿದ್ದಾನೆ. ಮಾತ್ರವಲ್ಲದೆ ಈ ಬಗ್ಗೆ ವಿಚಾರಿಸಿದಾಗ ಆತ ಗೆಳೆಯ ಡೇವಿಡ್ ಎಂಬಾತನಿಗೆ ನೀಡಿದ್ದಾಗಿ ತಿಳಿಸಿದ್ದು, ಈ ಬಗ್ಗೆ ಡೇವಿಡ್ ಬಳಿ ವಿಚಾರಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬಳಿಕ ಮಾ.25 ರಂದು ಆರೋಪಿಯ ಮನೆಗೆ ಹೋಗಿ ವಿಚಾರಿಸಿ ಸಿದ್ದಿಕ್ ಮತ್ತು ಆರೋಪಿಯ ಬಳಿ ಹಣಕಾಸಿನ ವ್ಯವಹಾರವಿದ್ದು, ಹಣ ಪಾವತಿ ಮಾಡದ ಕಾರಣ ಆರೋಪಿಯಿಂದ ಸಿದ್ಧಿಕ್ ಕಾರನ್ನು ತೆಗೆದುಕೊಂಡು ಹೋಗಿದ್ದಾನೆ, ಆತನ ಹಣ ಪಾವತಿ ಮಾಡಿದ ನಂತರ ಕಾರು ನೀಡುವುದಾಗಿ ತಿಳಿಸಿದ್ದಾನೆ. ಅದರಂತೆ ಕಾರನ್ನು ಯಾವುದೇ ಕಾನೂನು ಬಾಹಿರ ಕೃತ್ಯಗಳಿಗೆ ಬಳಸಿದ್ದರೆ ಆರೋಪಿ ಹೊಣೆಗಾರನಾಗಿದ್ದು, ಆರೋಪಿಯು ಕಾರನ್ನು ಕಾನೂನು ಬಾಹಿರ ಕೃತ್ಯಗಳಿಗೆ ಬಳಸಿಕೊಂಡು ವಂಚಿಸುವ ಉದ್ದೇಶವಿರುತ್ತದೆ. ಮೋಸ ಮಾಡಿ ಅಕ್ರಮವಾಗಿ ಕಾರನ್ನು ವಶದಲ್ಲಿಟ್ಟು ಕೊಂಡಿರುವುದಕ್ಕೆ ಪ್ರಾನ್ಸಿಸ್ ಕಿರಣ ಲಸ್ರಾದೊ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.