ಕಾರವಾರ: ಅನ್ಯ ಜಾತಿಯ ಯುವಕ-ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದು, ತಮಗೆ ರಕ್ಷಣೆ ಕೊಡಿ ಎಂದು ನವ ವಿವಾಹಿತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಇಲ್ಲಿನ ಹೆಗಡೆಕಟ್ಟಾ ಗ್ರಾಮದ ನೀಲಕಂಠ ನಾಯ್ಕ ಹಾಗೂ ಅದೇ ಗ್ರಾಮದ ವಸುಧಾ ಹೆಗಡೆ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅವರ ಪ್ರೀತಿದೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.
ಯುವಕ-ಯುವತಿ ಇಬ್ಬರೂ ವಯಸ್ಕರಾಗಿದ್ದರಿಂದ ಇಬ್ಬರೂ ಪರಸ್ಪರ ಒಪ್ಪಿ ಅಂಕೋಲಾ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದರು. ನವ ವಿವಾಹಿತ ಜೋಡಿ ಕಳೆದ ಒಂದು ವಾರದಿಂದ ಮನೆ ಬಿಟ್ಟು ಅಂಕೋಲಾದಲ್ಲಿ ತಂಗಿದೆ. ಯುವತಿಯ ಮನೆಯವರು ಈ ಸಂಬಂಧ ಶಿರಸಿ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ. ಇದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಯುವಕನಿಗೆ ಬೆದರಿಕೆಯನ್ನ ಸಹ ಒಡ್ಡಿದ್ದಾರೆ ಎಂದು ಜೋಡಿ ಆರೋಪಿಸಿದೆ.
ಈ ನವವಿವಾಹಿತ ಜೋಡಿ ಮನೆಯವರಿಗೆ ಹೆದರಿ ಕಳೆದೊಂದು ವಾರದಿಂದ ಅಂಕೋಲಾದಲ್ಲಿ ಉಳಿದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಯುವತಿ ಮನೆಯವರು ಶಿರಸಿ ಠಾಣೆಯಲ್ಲಿ ಯುವಕನ ವಿರುದ್ಧ ಯುವತಿ ಕಿಡ್ನ್ಯಾಪ್ ಪ್ರಕರಣವನ್ನ ದಾಖಲಿಸಿದ್ದು ಇದರಿಂದ ಯುವಜೋಡಿ ಕಂಗಾಲಾಗಿದ್ದಾರೆ. ಅಲ್ಲದೇ ಫೇಸ್ಬುಕ್ನಲ್ಲಿ ಸಹ ಯುವತಿ ಸಂಬಂಧಿಕರಿಂದ ಸಾಕಷ್ಟು ಬೆದರಿಕೆ ಕಮೆಂಟ್ಗಳು ಬರುತ್ತಿದ್ದು ಇದರಿಂದ ಆತಂಕ ಎದುರಾಗಿದೆ ಎಂದು ಯುವಜೋಡಿ ಅಲವತ್ತುಗೊಂಡಿದೆ. ಅಲ್ಲದೇ ಪೊಲೀಸ್ ಠಾಣೆಯಿಂದ ಕರೆಮಾಡಿಸಿ ಯುವಕನನ್ನ ಬೆದರಿಸುವ ಕೆಲಸವನ್ನ ಸಹ ಮಾಡಲಾಗುತ್ತಿದೆ. ಹೀಗಾಗಿ ಊರಿಗೆ ತೆರಳಿದಲ್ಲಿ ತಮ್ಮ ಜೀವಕ್ಕೆ ಅಪಾಯವಿದ್ದು ತಮಗೆ ರಕ್ಷಣೆ ನೀಡುವಂತೆ ಯುವಜೋಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾರೆ.