ಕಾರ್ಕಳ : ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಅಕ್ರಮವಾಗಿ ಮರಗಳನ್ನು ಕಡಿದು ಮಾರಾಟ ಮಾಡಿದ ಆರೋಪದಡಿ, ಮೂವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ಕಾರ್ಕಳ ತಾಲೂಕಿನ ಸೂಡಾ ಗ್ರಾಮದ ಗ್ರೊಟ್ಟ ಎಂಬಲ್ಲಿ ನಡೆದಿದೆ.
ಆರೋಪಿಗಳನ್ನು ಎಚ್ ಜಮೀರ್, ಮಹಮ್ಮದ್ ರಫಿ ಮತ್ತು ಇಮ್ರಾನ್ ಎನ್ನಲಾಗಿದೆ. ಸುಮಾರು 35 ಸಾವಿರ ರೂ. ಮೌಲ್ಯದ ಮರದ ದಿಮ್ಮಿಗಳನ್ನು ಹಾಗೂ ಸಾಗಾಟದ ವಾಹನ ವಶಪಡಿಸಿಕೊಂಡಿದ್ದಾರೆ. ಬಂಧಿತರಿ0ದ ಸಾಗಾಟಕ್ಕೆ ಬಳಸಲಾದ ಲಾರಿ ಹಾಗೂ ದೂಪ, ಮಾವು ಹಾಗೂ ಕಾಡುಜಾತಿಯ ಮರಗಳ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕುಂಬ್ಳೆ ಹೊಸಮನೆ ಶಂಕರ ಶೆಟ್ಟಿ ಎಂಬುವವರ ಪುತ್ರ ರಿತೇಶ್ ಶೆಟ್ಟಿ ಎಂಬವರ ಜಾಗದಲ್ಲಿ ಅಕ್ರಮವಾಗಿ ಈ ಮರಗಳನ್ನು ಕಡಿಯಲಾಗಿದೆ ಎಂದು ಬಂಧಿತ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
ಕಾರ್ಕಳ ವಲಯ ಅರಣ್ಯಾಧಿಕಾರಿ ಜಿ.ಡಿ ದಿನೇಶ್ ಮಾರ್ಗದರ್ಶನದಲ್ಲಿ ಉಪ ವಲಯಾರಣ್ಯಧಿಕಾರಿ ಹುಕ್ರಪ್ಪ ಗೌಡ, ಪ್ರಕಾಶ್ಚಂದ್ರ, ಅರಣ್ಯ ರಕ್ಷಕ ಭಾಸ್ಕರ್, ಅವಿನಾಶ್ ಹಾಗೂ ಪ್ರಕಾಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.