ನಡುರಾತ್ರಿ ವೇಳೆ ಮನೆಗೆ ನುಗ್ಗಿದ ಕಳ್ಳರು ಮನೆಯವರ ಕಣ್ಣಿಗೆ ಮೆಣಸಿನ ಪುಡಿ ಎರಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ. ಕಾರ್ಕಳ ತಾಲೂಕಿನ ಕೆರ್ವಾಶೆಯಲ್ಲಿ ಈ ಘಟನೆ ನಡೆದಿದೆ.
ಕೆರ್ವಾಶೆ ಗ್ರಾಮದ ದೇವಿಕೃಪಾ ಕೃಷ್ಣಭಟ್ (71)ರ ವರ ಮನೆ ರಾತ್ರಿ 01:30 ಗಂಟೆಯ ಸಮಯಕ್ಕೆ ಕಳ್ಳರು ನುಗ್ಗಿದ್ದಾರೆ. ಮನೆಯ ಹೊರಗೆ ನಾಯಿ ಬೊಗಳಿದ ಶಬ್ದ ಕೇಳಿ ಮನೆ ಬಾಗಿಲನ್ನು ತೆರೆದು ಹೊರಗೆ ಬಂದಾಗ ಯಾರೋ 2 ಜನ ಅಪರಿಚಿತರಿದ್ದು, ಓರ್ವ ಇವರ ಮುಖಕ್ಕೆ ಮೆಣಸಿನ ಪುಡಿಯನ್ನು ಎಸೆದು, ಇನ್ನೊಬ್ಬನು ಗಟ್ಟಿಯಾಗಿ ಹಿಡಿದು ಪಂಚೆಯನ್ನು ಹಿಡಿದೆಳೆದು ಅದನ್ನು ಅವರ ಮುಖಕ್ಕೆ ಸುತ್ತಿ ಕೂಗಾಡದಂತೆ ಬಾಯಿ ಹಾಗೂ ಕುತ್ತಿಗೆಯನ್ನು ಒತ್ತಿ ಹಿಡಿದಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೂಡಲೇ ಕೃಷ್ಣ ಭಟ್ ರವರು ತಪ್ಪಿಸಿಕೊಂಡು ಜೋರಾಗಿ ಬೊಬ್ಬೆ ಹೊಡೆದಾಗ ಇವರ ಕೈಯಲ್ಲಿದ್ದ ಟಾರ್ಚನ್ನು ತೆಗೆದುಕೊಂಡು ಇಬ್ಬರು ಅಪರಿಚಿತರು ಅಲ್ಲಿಂದ ಓಡಿ ಹೋಗಿದ್ದಾರೆ. ಮನೆಯಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆಂದು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.