ಮಂಗಳೂರು : ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು ಗುಣಮುಖರಾದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಬಿಜೆಪಿ ಪಕ್ಷದ ವತಿಯಿಂದ ನೂತನ ಆಟೋ ರಿಕ್ಷಾ ಹಾಗು 5 ಲಕ್ಷ ರೂಪಾಯಿ ಮೌಲ್ಯದ ಚೆಕ್ನ್ನು ಹಸ್ತಾಂತರಿಸಲಾಯಿತು.
ಈ ವೇಳೆ ಮಾತನಾಡಿದ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕುಕ್ಕರ್ ಬಾಂಬ್ ಸ್ಫೋಟಿಸುವ ಮೂಲಕ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಹುನ್ನಾರ ಈಗಾಗಲೇ ಬಯಲಾಗಿದೆ. ಎನ್ಐಎ ಅಧಿಕಾರಿಗಳೇ ಇದನ್ನು ಬಹಿರಂಗ ಪಡಿಸಿದ್ದು, ಕೃತ್ಯದ ಕುರಿತು ಅಪಹಾಸ್ಯ ಮಾಡಿದವರು, ಸ್ಫೋಟ ಮಾಡಿದವರನ್ನು ಅಮಾಯಕರು ಎಂದು ಹೇಳಿದ್ದ ಕಾಂಗ್ರೆಸಿಗರು ಈಗ ಏನು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.
ಕಳೆದ ವರ್ಷ ನವೆಂಬರ್ 19 ರಂದು ಕಂಕನಾಡಿ ಗರೋಡಿ ಬಳಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯಿಂದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಪ್ರೇಮಾನಂದ ಶೆಟ್ಟಿ, ಸಂದೀಪ್ ಗರೋಡಿ, ಸುಧೀರ್ ಶೆಟ್ಟಿ, ಶರಣ್ ಪಂಪ್ವೆಲ್ ಮೊದಲಾದವರು ಉಪಸ್ಥಿತರಿದ್ದರು.