ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯದ ಹೋಟೆಲ್ ಒಂದರಲ್ಲಿ ಯಾತ್ರರ್ಥಿಗಳ ಬ್ಯಾಗ್ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬಳನ್ನು ಬೆಂಗಳೂರಿನ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಮಮತಾ (38) ಬಂಧಿತ ಆರೋಪಿ. ಆರೋಪಿಯಿಂದ 20.2 ಲಕ್ಷ ರೂ. ಮೌಲ್ಯದ 439.32 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಮಮತಾ ತನ್ನ ಹತ್ತಿರದ ಸಂಬಂಧಿ ಜತೆ ಇತ್ತೀಚೆಗೆ ಎರಡನೇ ಮದುವೆ ಆಗಿದ್ದಳು. ವಿವಾಹದ ಬಳಿಕ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದರು. ಅದರಂತೆ ಆಗಸ್ಟ್ 19ರಂದು ಇಬ್ಬರೂ ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಮಾಡಿ ಮರುದಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿದ್ದರು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹೋಟೆಲ್ನಲ್ಲಿ ಉಪಾಹಾರ ಸೇವಿಸಲು ಹೋಗಿದ್ದಾಗ ಪಕ್ಕದ ಟೇಬಲ್ ನಲ್ಲಿದ್ದ ಪ್ರವಾಸಿಗರು ಬ್ಯಾಗ್ ಇಟ್ಟು ಕೈ ತೊಳೆಯಲು ಹೋಗಿದ್ದರು. ಇದನ್ನು ಗಮನಿಸಿದ ಆರೋಪಿಗಳು ಬ್ಯಾಗ್ ಕಳವು ಮಾಡಿ ಅಲ್ಲಿಂದ ಪರಾರಿ ಆಗಿದ್ದರು. ನಿರ್ಜನ ಪ್ರದೇಶದಲ್ಲಿ ಬ್ಯಾಗ್ ತೆಗೆದು ನೋಡಿದಾಗ ಬೆಲೆ ಬಾಳುವ ಚಿನ್ನಾಭರಣ ಇರುವುದು ಗೊತ್ತಾಗಿ ಖುಷಿಯಿಂದ ಬೆಂಗಳೂರಿಗೆ ಬಂದು ಲಗ್ಗೆರೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು.
ಕಳವು ಮಾಡಿದ್ದ ಚಿನ್ನಾಭರಣವನ್ನು ಸ್ವಲ್ಪ ಅಡವಿಟ್ಟು ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ಆ. 25ರಂದು ಯಶವಂತಪುರ 1ನೇ ಮುಖ್ಯರಸ್ತೆಯ ಎಸ್.ಕೆ. ಜ್ಯುವೆಲರಿ ಅಂಗಡಿ ಬಳಿ ಚಿನ್ನ ಮಾರಾಟಕ್ಕೆ ಮಮತಾ ದಂಪತಿ ಬಂದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಗಸ್ತು ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆಯುತ್ತಿದ್ದಂತೆ ಪತಿ ತಪ್ಪಿಸಿಕೊಂಡಿದ್ದಾನೆ.
ಮಮತಾಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಚಿನ್ನದ ಅಂಗಡಿಗಳಲ್ಲಿ ಅಡವಿಟ್ಟ 10 ರಸೀದಿಗಳು ಮತ್ತು 4 ಗ್ರಾಂ ಚಿನ್ನದ 2 ಉಂಗುರಗಳು ಪತ್ತೆಯಾಗಿವೆ. ಚಿನ್ನವನ್ನು ಕುಕ್ಕೆಯಲ್ಲಿ ಕಳವು ಮಾಡಿರುವ ವಿಷಯ ಬಾಯ್ಬಿಟ್ಟಿದ್ದಾಳೆ. ಈಕೆಯ ಪತಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ.