ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಕೆಲ ದಿನಗಳ ಹಿಂದೆ ನಡೆದ ಕೊರೊನಾ ಕಂಟ್ರೋಲ್ ಸಭೆಯಲ್ಲಿ, ಹೈ-ರಿಸ್ಕ್ ದೇಶಗಳಿಂದ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ದು, ಈ ಸಂಬಂಧ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಕ್ರಮಗಳನ್ನು ಪ್ರಕಟಿಸಲಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಟಿ.ಕೆ ಅನಿಲ್ ಕುಮಾರ್ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿಯು ನಿಯಂತ್ರಣದಲ್ಲಿದ್ದು, ದೈನಂದಿನ ಸರಾಸರಿ 110 ಪ್ರಕರಣಗಳು ಮತ್ತು ಶೇ.0.9 ರಿಂದ ಶೇ.1.1ರಷ್ಟು ಪಾಸಿಟಿವಿಟಿ ಪ್ರಮಾಣ ವರದಿಯಾಗುತ್ತಿದೆ ಎಂದರು.
ಇನ್ನು ಭಾರತ ಸರ್ಕಾರ ಮಾರ್ಗಸೂಚಿಯಂತೆ, ನಿಗದಿತ ದೇಶಗಳಿಂದ ಬರುವ ಶೇ.2ರಷ್ಟು ಪ್ರಯಾಣಿಕರನ್ನು ರ್ಯಾಂಡಮ್ ಮಾದರಿಯಲ್ಲಿ ವಿಮಾನ ನಿಲ್ದಾಣದಲ್ಲಿಯೇ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇತ್ತೀಚಿಗೆ ದಕ್ಷಿಣ ಕೋರಿಯಾ, ಆಸ್ಟ್ರೇಲಿಯಾ, ಜಪಾನ್, ಥೈಲ್ಯಾಂಡ್, ವಿಯೆಟ್ನಾಂ, ನ್ಯೂಜಿಲಾಂಡ್, ರಷ್ಯಾ ಹಾಗೂ ಚೀನಾ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಪಾನ್ ಹಾಗೂ ಥೈಲ್ಯಾಂಡ್ ದೇಶಗಳಿಂದ ಬೆಂಗಳೂರಿಗೆ ನೇರ ವಿಮಾನ ಸಂಪರ್ಕವಿರುವ ಹಿನ್ನಲೆಯಲ್ಲಿ, ಈ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ತಪಾಸಣಾ ಹಾಗೂ ಸರ್ವೇಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.