ತಿರುವನಂತಪುರ: ಕೊರೊನಾ ವೈರಸ್ಗೆ ಲಸಿಕೆ ಬರುತ್ತಿರುವ ಸಿಹಿ ಸುದ್ದಿಯ ಬೆನ್ನಲ್ಲೇ ಮತ್ತೊಂದು ವೈರಸ್ ಕೇರಳಕ್ಕೆ ವಕ್ಕರಿಸಿದೆ. ಉತ್ತರ ಕೇರಳದ 11 ವರ್ಷದ ಬಾಲಕನಿಗೆ ಶಿಗೆಲ್ಲಾ ಎಂಬ ಸೋಂಕು ಹರಡಿ ಸಾವನ್ನಪ್ಪಿದ್ದಾನೆ.
ಬಾಲಕ ಸಾವನ್ನಪ್ಪಿದ 2 ದಿನಗಳ ಬಳಿಕ ಕೋಜಿಕೋಡ್ ಜಿಲ್ಲೆಯ 20 ಜನರಿಗೆ ಈ ಸೋಂಕು ಕಾಣಿಸಿಕೊಂಡಿದೆ.ಮೃತ ಬಾಲಕನ ಸಂಪರ್ಕದಲ್ಲಿದ್ದವರಿಗೆ ಈ ರೀತಿ ಸಮಸ್ಯೆ ಆಗಿದೆ ಅಂತ ಜಿಲ್ಲೆಯ ಆರೋಗ್ಯ ಅಧಿಕಾರಿ ಡಾಕ್ಟರ್ ಜಯಶ್ರೀ ತಿಳಿಸಿದ್ದಾರೆ. ಈ ವಿಚಾರವಾಗಿ ತನಿಖೆ ಮಾಡಲು ಆರೋಗ್ಯ ಸಚಿವೆ ಶೈಲಜಾ ಸೂಚಿಸಿದ್ದು ಪ್ರದೇಶದ ಸುತ್ತ ಮುತ್ತ ಹೆಲ್ತ್ ಕ್ಯಾಂಪ್ಗಳನ್ನ ಹಾಕಲಾಗಿದೆ. ನೀರು ಅಥವಾ ಆಹಾರದಿಂದ ಈ ಸೋಂಕು ಹರಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಉತ್ತರ ಕೇರಳದಲ್ಲಿ ಹೈ ಆಲರ್ಟ್ ಘೋಷಣೆ ಮಾಡಲಾಗಿದ್ದು. ಆತಂಕಕ್ಕೆ ಒಳಗಾಗಿರುವ ಆರೋಗ್ಯ ಅಧಿಕಾರಿಗಳು ಸೋಂಕು ಕಾಣಿಸಿಕೊಂಡ ಪ್ರದೇಶದ ಎಲ್ಲಾ ಜಲಮೂಲಗಳನ್ನು ಶುಕ್ರವಾರವೇ ಸೂಪರ್ ಕ್ಲೋರಿನೇಟ್ ಮಾಡಿದ್ದಾರೆ.ಕಳೆದ ವರ್ಷ ಕೀಜ್ಪ್ಯೂರ್ ಜಿಲ್ಲೆಯ ಪಶ್ಚಿಮ ಕಿರಿಯ ಪ್ರಾಥಮಿಕ ಶಾಲೆಯ 40ಕ್ಕೂ ಹೆಚ್ಚು ಮಕ್ಕಳು ವಾಂತಿ ಮತ್ತು ಅತಿಸಾರದಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಈ ವೇಳೆ ಇಬ್ಬರು ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಮಾದರಿಗಳಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ ಇರುವುದು ದೃಢವಾಗಿತ್ತು. ಚಿಕಿತ್ಸೆ ನೀಡಿದ ಬಳಿಕ ವಿದ್ಯಾರ್ಥಿಗಳಿಬ್ಬರು ಸೋಂಕಿನಿಂದ ಚೇತರಿಸಿಕೊಂಡಿದ್ದರು. ನಂತರ ಜಿಲ್ಲಾ ಆರೋಗ್ಯ ಇಲಾಖೆ, ವಿದ್ಯಾರ್ಥಿಗಳ ಮನೆಯ ನೀರಿನಲ್ಲಿ ಬ್ಯಾಕ್ಟೀರಿಯಾ ಇರುವುದನ್ನು ಪತ್ತೆ ಮಾಡಿತ್ತು.ತಜ್ಞರ ಮಾಹಿತಿಯ ಅನ್ವಯ, ಶಿಗೆಲ್ಲೊಸಿಸ್ ಸೋಂಕು ಶಿಗೆಲ್ಲಾ ಬ್ಯಾಕ್ಟೀರಿಯಾದಿಂದ ಬರುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಸೋಂಕಿಗೆ ತುತ್ತಾದವರು ಹೊಟ್ಟೆ ನೋವು, ಅತಿಸಾರ ಮತ್ತು ಜ್ವರದಿಂದ ಭಾದಿತರಾಗುತ್ತಾರೆ.
ವಿಶ್ವಾದ್ಯಂತದ ಸೋಂಕಿನ ಸಮಸ್ಯೆ ಇದ್ದರೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ವಿಶೇಷವಾಗಿ ಶಾಲೆಗಳು, ಆರೈಕೆ ಕೇಂದ್ರಗಳು, ನರ್ಸಿಂಗ್ ಹೋಂಗಳು ಅಥವಾ ನೈರ್ಮಲ್ಯ ರಹಿತ ಪ್ರದೇಶಗಳಲ್ಲಿ ಶಿಗೆಲ್ಲಾ ಹೆಚ್ಚಾಗಿ ಕಂಡುಬರುತ್ತದೆ. ಸಾಮನ್ಯವಾಗಿ ಕಾಣಿಸಿಕೊಳ್ಳುವ ಅತಿಸಾರಕ್ಕಿಂತ ಶಿಗೆಲ್ಲಾ ಸೋಂಕಿನ ಲಕ್ಷಣ ಹೆಚ್ಚು ಪ್ರಬಲವಾಗಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.