ಬೆಂಗಳೂರು: ಕೋರಮಂಗಲದಲ್ಲಿ ನಡೆದಿದ್ದ ಭೀಕರ ಆಡಿ ಕಾರು ಅಪಘಾತ ಪ್ರಕರಣ ಕಾರಿನಲ್ಲಿದ್ದವರು ಡ್ರಗ್ಸ್ ಸೇವನೆ ಮಾಡಿ ಕಾರು ಚಲಾಯಿಸಿದ್ದರಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡಿದ್ದಾರೆ.
ಕೋರಮಂಗಲದ ಮಂಗಳ ಕಲ್ಯಾಣ ಮಂಟಪ ಮಧ್ಯರಾತ್ರಿ 1.30ರ ಸುಮಾರಿಗೆ ಆಡಿ ಕಾರ್ವೊಂದು ಭೀಕರ ಅಪಘಾತಕ್ಕೀಡಾಗಿತ್ತು. ಕಾರಿನಲ್ಲಿದ್ದ ಹೊಸೂರು ಶಾಸಕ ಪ್ರಕಾಶ್ ಪುತ್ರ ಕರುಣಾಸಾಗರ್, ಸೊಸೆ ಬಿಂದು, ಇಶಿತಾ, ಡಾ.ಧನುಷಾ, ಅಕ್ಷಯ್ ಗೋಯಲ್, ಉತ್ಸವ್ ಹಾಗೂ ರೋಹಿತ್ ಸೇರಿದಂತೆ ಒಟ್ಟು 7 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಅಪಘಾತದ ಬೆನ್ನಲ್ಲೇ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಕಾರು ಓವರ್ ಸ್ಪೀಡ್ನಲ್ಲಿತ್ತು ಎಂದು ತಿಳಿದುಬಂದಿದೆ. ಇನ್ನೊಂದೆಡೆಯಲ್ಲಿ ಸಾವನ್ನಪ್ಪಿರುವ ಬಿಂದು ಹಾಗೂ ಇಶಿತಾ ಮದ್ಯದಂಗಡಿಯಿಂದ ಮದ್ಯ ಖರೀದಿಸಿ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿರುವ ದೃಶ್ಯ ಕೂಡ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಷ್ಟೇ ಅಲ್ಲಾ ಬ್ರೇಕ್ ಅಡಿಯಲ್ಲಿ ಬಾಟಲಿ ಸಿಲುಕಿಕೊಂಡು ಅಪಘಾತಕ್ಕೆ ಕಾರಣವಾಗಿದೆಯಾ ಅನ್ನೋ ಅನುಮಾನವೂ ವ್ಯಕ್ತವಾಗಿದೆ. ಇದೀಗ ಇಂದ್ರಜಿತ್ ಲಂಕೇಶ್ ಅಪಘಾತಕ್ಕೆ ಡ್ರಗ್ಸ್ ಲಿಂಕ್ ಕೊಟ್ಟಿದ್ದಾರೆ.
ಕೋರಮಂಗಲದಲ್ಲಿ ಅಪಘಾತ ನಡೆದಿರುವ ರಸ್ತೆಯಲ್ಲಿ ಸಾಮಾನ್ಯವಾಗಿ ಅತೀ ವೇಗದಲ್ಲಿ ಸಾಗೋದಕ್ಕೆ ಸಾಧ್ಯವಿಲ್ಲ. ಹೀಗಾಗಿ ಕಾರಿನಲ್ಲಿದ್ದವರು ಡ್ರಗ್ಸ್ ಸೇವನೆಯನ್ನು ಮಾಡಿಯೇ ಕಾರು ಚಲಾಯಿಸಿರುವ ಸಾಧ್ಯತೆಯಿದೆ. ನಾನು ಈ ಹಿಂದೆಯೂ ಉದ್ಯಮಿಗಳು, ರಾಜಕಾರಣಿಗಳು, ಸಿನಿಮಾ ನಟ, ನಟಿಯರ ಮಕ್ಕಳು ಡ್ರಗ್ಸ್ ಸೇವನೆ ಮಾಡುತ್ತಾರೆ ಅನ್ನೋದಾಗಿ ತಿಳಿಸಿದ್ದೇನೆ. ಇದೀಗ ಅಪಘಾತಕ್ಕೂ ಡ್ರಗ್ಸ್ ಲಿಂಕ್ ಇರುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ನಡೆಸಬೇಕಾಗಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪವನ್ನು ಮಾಡಿದ್ದಾರೆ.
5 ಜನರಿಗೆ ಕುಳಿತುಕೊಳ್ಳುವ ಆಡಿ ಕಾರಿನಲ್ಲಿ 7 ಜನರು ಹೇಗೆ ಇದ್ದರೆಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಅತೀ ವೇಗವಾಗಿ ಕಾರು ಚಾಲನೆಯಿಂದ ಇದೀಗ ಏಳು ಮಂದಿಯ ಜೀವವನ್ನೇ ಬಲಿ ಪಡೆದಿದೆ. ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬಸ್ಥರು ಇದೀಗ ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದಾರೆ. ಪೊಲೀಸರು ಅಪಘಾತಕ್ಕೆ ನಿಖರವಾದ ಕಾರಣ ಹುಡುಕುವ ಕಾರ್ಯವನ್ನು ಮಾಡಬೇಕಾಗಿದೆ.