ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿ ಕ್ರೈಂ ಎಪಿಸೋಡ್ ನೋಡಿ ಪತಿಯ ಹತ್ಯೆಗೆ ಸ್ಕೆಚ್ ಹಾಕಿದ ಪತ್ನಿ, ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಕಥೆಯನ್ನೇ ಮುಗಿಸಿದ್ದಾಳೆ. ಪ್ರಿಯಕರನೊಂದಿಗೆ ಸೇರಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ ಈ ಕಳ್ಳ ಜೋಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಕೊಲೆಯಾದ ಪತಿ ಶಶಿಕುಮಾರ್ (35) ಎನ್ನಲಾಗಿದೆ. ಕೊಲೆಗೈದ ಆರೋಪದಡಿ ಶಶಿಕುಮಾರ್ ಪತ್ನಿ ನಾಗಮಣಿ (28) ಮತ್ತು ಆಕೆಯ ಪ್ರಿಯಕರ ಕನಕಪುರದ ಹೇಮಂತ್ (25) ಜೈಲು ಸೇರಿದ್ದಾರೆ.
ಘಟನೆ:
ಮಂಡ್ಯದ ಮಳವಳ್ಳಿ ಪಟ್ಟಣದ ಎನ್ಇಎಸ್ ಬಡಾವಣೆಯಲ್ಲಿ ಕಳೆದ ಸೆ.18 ರಂದು ಶಶಿಕುಮಾರ್ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಬಗ್ಗೆ ಶಶಿಕುಮಾರ್ ತಾಯಿಗೆ ಸೊಸೆ ನಾಗಮಣಿ ಕೆಲವು ದುಷ್ಕರ್ಮಿಗಳು ಬಂದು ನನ್ನ ಹಾಗೂ ಮಗನ ಕೈ ಕಾಲು ಕಟ್ಟಿ ರೂಮಿನಲ್ಲಿ ಕೂಡಿ ಹಾಕಿ ಶಶಿಕುಮಾರ್ನನ್ನು ಕೊಲೆ ಮಾಡಿ ಪರಾರಿಯಾದರು ಎಂದು ಹೇಳಿದ್ದಳು. ಇದನ್ನು ನಂಬದ ಶಶಿಕುಮಾರ್ ತಾಯಿ ಸೊಸೆಯ ಮೇಲೆ ಅನುಮಾನಗೊಂಡು ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರ ತಂಡವಿಚಾರಣೆ ವೇಳೆ ನಾಗಮಣಿ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಸಂಬಂಧ ಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಗೆ ಕಾರಣ?
ನಾಗಮಣಿ ಮತ್ತು ಹೇಮಂತ್ ಕನಕಪುರ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರಿಗೂ ಪರಿಚಯವಾಗಿ ಅನೈತಿಕ ಸಂಬಂಧ ಹೊಂದಿದ್ದರು. ಪತ್ನಿಯ ಅನೈತಿಕ ಸಂಬಂಧ ತಿಳಿದು ಶಶಿಕುಮಾರ್ ಪತ್ನಿಯನ್ನು ಕಳೆದ ಎರಡು ತಿಂಗಳ ಹಿಂದೆ ಕೆಲಸ ಬಿಡಿಸಿ ಮಳವಳ್ಳಿ ಮನೆಗೆ ಕರೆತಂದು ಮನೆಯಲ್ಲಿಯೇ ಇರುವಂತೆ ಹೇಳಿದ್ದರು ಎನ್ನಲಾಗಿದೆ. ತಮ್ಮ ಅನೈತಿಕ ಸಂಬಂಧ ತಪ್ಪಿ ಹೋದ ಹಿನ್ನೆಲೆಯಲ್ಲಿ ಕೋಪಗೊಂಡ ನಾಗಮಣಿ ಪ್ರಿಯಕರ ಹೇಮಂತ್ ಜೊತೆಗೂಡಿ ಪತಿ ಶಶಿಕುಮಾರ್ನನ್ನು ಕೊಲೆ ಮಾಡಲು ನಿರ್ಧರಿಸಿದ್ದರು.
ಕ್ರೈಂ ಎಪಿಸೋಡ್ ನೋಡಿ ಕೊಲೆ; ಕಳ್ಳಾಟ ಬಯಲು, ಜೋಡಿ ಜೈಲು ಪಾಲು
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕ್ರೈಂ ಎಪಿಸೋಡ್ ಕಾರ್ಯಕ್ರಮದಿಂದ ಪ್ರೇರಿತಳಾದ ನಾಗಮಣಿ ಪ್ರಿಯಕರ ಹೇಮಂತ್ ನನ್ನು ಭಾನುವಾರ ರಾತ್ರಿ ಮನೆಗೆ ಕರೆಸಿಕೊಂಡು ಮನೆಯಲ್ಲಿದ್ದ ಮಗನಿಗೆ ಮೊಬೈಲ್ ನೀಡಿ ರೂಮಿನಲ್ಲಿ ಆಟವಾಡಿಕೊಳ್ಳಲು ಹೇಳಿ ಶಶಿಕುಮಾರ್ನನ್ನು ದಿಂಬು ಮತ್ತು ವೇಲ್ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಯಾರೋ ದುಷ್ಕರ್ಮಿಗಳು ಬಂದು ನನ್ನನ್ನು ಮತ್ತು ಮಗನನ್ನು ಕೈ ಕಾಲು ಕಟ್ಟಿ ರೂಮಿನಲ್ಲಿ ಕೂಡಿಹಾಕಿ ಗಂಡನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ನಾಟಕವಾಡಿದ್ದಳು. ಕೊಲೆ ನಾಟಕವಾಡ್ತಿದ್ದ ನಾಗಮಣಿಯ ವಿರುದ್ಧ ದೂರು ದಾಖಲಾಗ್ತಿದ್ದಂತೆ ಪೊಲೀಸರು ನಾಗಮಣಿಯಿಂದಲೇ ನಿಜಾಂಶ ಹೊರಗೆಡವಿದ್ದಾರೆ. ಸದ್ಯ ಈ ಕಳ್ಳ ಜೋಡಿಗಳ ಕಳ್ಳಾಟ ಈಗ ಬಯಲಾಗಿದ್ದು, ಕೊಲೆ ರಹಸ್ಯ ಹೊರ ಬಿದ್ದಿದೆ.