ಕನ್ನಡ ಚಿತ್ರರಂಗದಲ್ಲೇ ಭರ್ಜರಿ ಗೆಲವು ಸಾಧಿಸಿರುವ ಚಿತ್ರ ಇದಾಗಿದೆ. ರಾಜ್ ಬಿ.ಶೆಟ್ಟಿ ನಿರ್ದೇಶನ ಗರುಡ ಗಮನ ವೃಷಭ ವಾಹನ ಚಿತ್ರದ ವಿರುದ್ದ ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ನಟ ರಾಜ್ ಬಿ.ಶೆಟ್ಟಿ ಅವರು (ಶಿವ) ಕೊಲೆ ಮಾಡಿ ಹುಲಿ ನೃತ್ಯ ಮಾಡುವ ದೃಶ್ಯದ ಹಿನ್ನಲೆಯಲ್ಲಿ ಸೂಜುಗಾದ ಸೂಜಿ ಮಲ್ಲಿಗೆ.. ಎಂಬ ಮಲೆ ಮಹದೇಶ್ವರಸ್ವಾಮಿಯ ಜಾನಪದ ಹಾಡನ್ನು ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಈ ಕುರಿತಂತೆ ಗರುಡ ಗಮನ, ವೃಷಭ ವಾಹನ ಚಿತ್ರ ಯಶಸ್ವಿಯಾಗಲಿ.. ಆದರೆ, ಕೊಲೆ ಮಾಡಿ ಕುಣಿಯೋ ದೃಶ್ಯವೊಂದರಲ್ಲಿ ಆ ದೃಶ್ಯಕ್ಕೆ ಸಂಬಂಧವೇ ಇರದ, ಅಸಹಜವಾಗಿ ಮಹದೇಶ್ವರನ ಹಾಡು ಸೂಜುಗಾದ ಸೂಜಿ ಮಲ್ಲಿಗೆಯನ್ನು ಬಳಸಿಕೊಳ್ಳಲಾಗಿದೆ. ಭಕ್ತಿ, ಭಾವ ಸೂಚಿಸಲು ಬಳಸುವ ಒಂದು ದೈವಿಕ ಜನಪದ ಗೀತೆಯನ್ನ ಹೀಗೇ ಕೊಲೆ ದೃಶ್ಯಕ್ಕೆ ಬಳಸಿಕೊಳ್ಳುವುದು ಸರಿಯೇ?
ಜಾನಪದ ಅಂದ ತಕ್ಷಣ ಏನಕ್ಕೆ ಬೇಕಾದರೂ ಬಳಸಿಕೊಳ್ಳಬಹುದೇ? ಯಾರೂ ಕೇಳುವಂತಿಲ್ಲವೇ? ಯಾವ ಹಾಡನ್ನು ಯಾವ ಸನ್ನಿವೇಶಕ್ಕೆ ಬಳಸಿಕೊಳ್ಳಬೇಕೆಂಬ ಸಣ್ಣ ಪ್ರಜ್ಞೆಯು ಇರಲಿಲ್ಲವೇ? ಮಾರ್ಕೆಟ್ ಬೇರೆ ರೀತಿಯಲ್ಲೇ ಮಾಡಿಕೊಳ್ಳಬಹುದು. ಹೀಗಲ್ಲ. ಚಿತ್ರ ತಂಡ ಗಮನಿಸಬೇಕು’ ಎಂದು ಮಹದೇಶ್ವರ ಬೆಟ್ಟದ ವ್ಯಾಪ್ತಿಯವರೇ ಆದ ಯುವ ಸಾಹಿತಿ ಸ್ವಾಮಿ ಪೊನ್ನಾಚಿ ಅವರು ತಮ್ಮ ಫೇಸ್ಬುಕ್ ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಅಲ್ಲದೇ ಬರಹಗಾರ್ತಿ ಕುಸುಮಾ ಆಯರಹಳ್ಳಿ ಕೂಡ ತಮ್ಮ ಫೇಸ್ಬುಕ್ ಪುಟದಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.