ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಕೇಳಿ ಬಂದಾಗಿನಿಂದ ಕಾಂಗ್ರೆಸ್ ಅದನ್ನೇ ಬಂಡವಾಳವನ್ನಾಗಿರಿಸಿ ವಿವಿಧ ರೀತಿಯಲ್ಲಿ ಟಾಂಗ್ ನೀಡಿದೆ. ಬಿಜೆಪಿ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ಕೈ ಪಡೆ ಪೇಸಿಎಂ ಅಭಿಯಾನದ ಬಳಿಕ ತಕ್ಕ ಮಟ್ಟಿಗೆ ಸೈಲೆಂಟ್ ಆಗಿತ್ತು. ಆದ್ರೆ ಇದೀಗ ಮತ್ತೆ ಆಡಳಿತರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ೪೦ % ಸರ್ಕಾರ ಅನ್ನುವ ಫೇಸ್ಬುಕ್ ಪೇಜ್ನಲ್ಲಿ ವಿಭಿನ್ನ ಪೋಸ್ಟರ್ಗಳನ್ನು ಪೋಸ್ಟ್ ಮಾಡಲಾಗಿದೆ.
ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದ ಪೇಸಿಎಂ ಬಳಿಕ ಕಾಂಗ್ರೆಸ್ ಸಿನಿಮಾದ ಪೋಸ್ಟರ್ ರೀತಿಯಲ್ಲಿ ಹೊಸ ಅಭಿಯಾನವೊಂದನ್ನು ಶುರು ಮಾಡಿಕೊಂಡಿದೆ. ಸಿನಿಮಾಗಳ ಹೆಸರನ್ನು ಬಳಸಿಕೊಂಡು ಪೋಸ್ಟರ್ ಗಳನ್ನು ರೆಡಿ ಮಾಡಿ ಅಭಿಯಾನ ಆರಂಭಿಸಿದ್ದಾರೆ.
ಸಿಎಂ ಸೇರಿದಂತೆ ಸಚಿವರುಗಳ ಫೋಟೋಗಳನ್ನು ಬಳಸಿಕೊಂಡು ಸಿನಿಮಾದ ಹೆಸರಿಟ್ಟು, ಪೋಸ್ಟರ್ ರೆಡಿ ಮಾಡಿದ್ದಾರೆ. ಈ ಪೋಸ್ಟರ್ ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಳೇ ಕಾಲದ ಸಿನೆಮಾ ಟೈಟಲ್ಗೆ ರಾಜಕೀಯ ವಿಡಂಬನೆಯನ್ನು ತೋರಿಸಲಾಗಿದೆ.
ಸಿಎಂ ಬೊಮ್ಮಾಯಿ ಹಾಗೂ ಅಶ್ವತ್ಥ್ ನಾರಾಯಣ್ ಕಾಂಬಿನೇಷನ್ ನಲ್ಲಿ ಕಿಲಾಡಿ ಜೋಡಿ ಬರುತ್ತಿದೆ, ಸಿಎಂ ಬೊಮ್ಮಾಯಿ ಒಬ್ಬರೆ ಇರುವಂತ ಪ್ರಚಂಡ ಕುಳ್ಳ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪೋಸ್ಟರ್ ನಲ್ಲಿ ಹಾರ ಹಿಡಿದುಕೊಂಡು ನಿಂತಿರುವಂತೆ ಎಡಿಟ್ ಮಾಡಿದ್ದು, ಆ ಸಿನಿಮಾಗೆ ಚಪಲ ಚನ್ನಿಗರಾಯ ಎಂದು ಹೆಸರಿಡಲಾಗಿದೆ. ಇನ್ನು ಚೋರ ಚಿತ್ತ ಚೋರ, ಎದ್ದೇಳು ಮಂಜುನಾಥಾ…! ದಂಡುಪಾಳ್ಯ, ರೂಪಾಯಿ ರಾಜ, ಡೀಲ್ರಾಜ ಹೀಗೆ ಅನೇಕ ಸಿನೆಮಾ ಪೋಸ್ಟರ್ಗಳನ್ನು ಕಾಂಗ್ರೆಸ್ ಫೇಸ್ಬುಕ್ ಪೇಜ್ನಲ್ಲಿ ಪ್ರಕಟಿಸಿದೆ.
ಇನ್ನು ಈ ಪೋಸ್ಟರ್ ಗಳಲ್ಲಿ 40% ಸರ್ಕಾರ ಬಿಜೆಪಿ ಅಂದ್ರೆ ಭ್ರಷ್ಟಚಾರ ಎಂಬುದನ್ನು ಕರ್ನಾಟಕ ಮ್ಯಾಪ್ ನಲ್ಲಿ ಹಾಕಿದ್ದಾರೆ. ಈ ಎಲ್ಲಾ ಸಿನಿಮಾಗಳಿಗೆ ನಿರ್ದೇಶಕರು, ನಿರ್ಮಾಪಕರು, ಸಂಗೀತ ನಿರ್ದೇಶಕರು ಬದಲಾಗಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೀಗೆ ಭಿನ್ನವಾಗಿ ಮತ್ತೆ ಅಭಿಯಾನ ಶುರು ಮಾಡಿದ್ದಾರೆ.