ಚೆನ್ನೈ: ಚೆನ್ನೈನ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ಘಟನೆ ಚೆನ್ನೈ ನಲ್ಲಿ ನಡೆದಿದೆ. ಈಕೆ ಬರೆದ ಡೆತ್ ನೋಟ್ ನ ಸಾಲುಗಳು ಮನಕಲಕುತ್ತೆ.
‘ಸಾಯುವುದು ಬಿಟ್ಟು ನನಗೇನೂ ತೋರುತ್ತಿಲ್ಲ. ಹೆಣ್ಣು ಎಲ್ಲಿಯೂ ಸುರಕ್ಷಿತವಾಗಿಲ್ಲ. ತಾಯಿಯ ಗರ್ಭ, ಸಮಾಧಿಯಷ್ಟೇ ಅವಳಿಗೆ ಸುರಕ್ಷಿತವಾಗಿರೋ ಜಾಗ. ವಿದ್ಯೆ ಹೇಳುವ ಶಾಲೆಯಲ್ಲಿಯೂ ಹೆಣ್ಣು ಸುರಕ್ಷಿತವಾಗಿಲ್ಲ. ಅದನ್ನೂ ನಂಬಬೇಡಿ, ಶಿಕ್ಷಕರನ್ನೂ ನಂಬಬೇಡಿ… ನನಗಾದ ಅನ್ಯಾಯ ಯಾರಿಗೂ ಆಗದಿರಲಿ, ನನಗೆ ನ್ಯಾಯ ಕೊಡಿಸಿ, ಸಾಯುವುದು ಬಿಟ್ಟರೆ ಬೇರೇನೂ ನನಗೆ ಉಳಿದಿಲ್ಲ..’
‘ಇಂಥ ಲೈಂಗಿಕ ಕಿರುಕುಳ ಇನ್ನಾದರೂ ನಿಲ್ಲಲಿ. ಶಾಲೆ ಸೇರಿದಂತೆ ಯಾವುದೂ ಹೆಣ್ಣಿಗೆ ಸುರಕ್ಷಿತವಾಗಿಲ್ಲ, ಈ ಸಮಾಜವನ್ನೂ ನಂಬಬೇಡಿ…’ ಎಂದು ಬರೆದಿರುವ ಬಾಲಕಿ, ತನ್ನ ಸಾವಿಗೆ ಯಾರು ಕಾರಣರು ಎಂದು ನಿಖರವಾಗಿ ಉಲ್ಲೇಖಿಸಿಲ್ಲ. ಆದರೆ ಆಕೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಆಗಿರುವುದು ಪತ್ರದಿಂದ ತಿಳಿದುಬಂದಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ತನಿಖೆ ಮಾಡಿದಾಗ ಕಾಲೇಜಿನ ಪ್ರಾಧ್ಯಾಪಕನೊಬ್ಬ ವಿರುದ್ಧ ವಿದ್ಯಾರ್ಥಿನಿಯರು ದೂರು ಹೇಳಿದ್ದಾರೆ. ಆತನೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ. ವಿದ್ಯಾರ್ಥಿನಿಯರ ಜತೆ ಈ ಪ್ರಾಧ್ಯಾಪಕ ಅಸಭ್ಯವಾಗಿ ವರ್ತಿಸುತ್ತಿದ್ದು, ಆಕೆಯ ಜತೆ ಕೂಡ ಹೀಗೆ ನಡೆದುಕೊಂಡಿರುವುದಾಗಿ ಅವರು ದೂರಿದ್ದಾರೆ.
ಬಾಲಕಿ ಸಾಯುತ್ತಿದ್ದಂತೆಯೇ, ಕಾಲೇಜಿನ ವಿದ್ಯಾರ್ಥಿನಿಯರು ಈ ಕಾಮುಕ ಪ್ರಾಧ್ಯಾಪಕ ಮಡಂಬಾಕ್ಕಂನ ಪ್ರೊಫೆಸರ್ ಅಬ್ರಹಾಂ ಅಲೆಕ್ಸ್ (48) ವಿರುದ್ಧ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳು ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದಿದ್ದರಿಂದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈತ ಪದೇ ಪದೇ ಡಬಲ್ ಮೀನಿಂಗ್ ಎನ್ನಿಸುವ ಅಸಹ್ಯ ಜೋಕ್ ಮಾಡುವ ಜತೆಗೆ ವಿದ್ಯಾರ್ಥಿನಿಯರ ಜತೆ ತೀರಾ ಕೆಟ್ಟದಾಗಿ ನಡೆದುಕೊಳ್ಳುತ್ತಿರುವುದಾಗಿ ಆರೋಪಿಸಲಾಗಿದೆ. ಈ ಮೊದಲೇ ಈತನ ವಿರುದ್ಧ ದೂರಿದ್ದರೂ ಕಾಲೇಜಿನ ಆಡಳಿತ ಮಂಡಳಿ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.
ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುವಲ್ಲಿ ಕಾಲೇಜು ಆಡಳಿತ ವಿಫಲವಾಗಿದ್ದು, ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರೆಸಿದ್ದರಿಂದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗಆತನ ವಿರುದ್ಧ ಪ್ರಕರಣ ದಾಖಲಾಗಿದೆ.