

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಮಾಸುವುದಕ್ಕೂ ಮುನ್ನವೇ ಮತ್ತೊಬ್ಬ ಯುವಕನ ಬರ್ಬರ ಹತ್ಯೆ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ. ಈ ಘಟನೆ ವಿಜಯಪುರದಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಶಾಂತ ಕ್ಷತ್ರಿ ಹತ್ಯೆಗೊಳಗಾದ ಯುವಕ.
ಟಿಪ್ಪುಸುಲ್ತಾನ್, ಶಿವಾಜಿ ಮಹಾರಾಜ್ ವೃತ್ತ ನಿರ್ಮಾಣ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ದ್ವೇಷದ ಹಿನ್ನೆಲೆ 8 ಯುವಕರು ಆಗಸ್ಟ್ 23ರಂದು ಪ್ರಶಾಂತ್ ಕ್ಷತ್ರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಯ ನಂತರ ಮೃತದೇಹವನ್ನು ಗುಂಡಿಯಲ್ಲಿ ಮುಚ್ಚಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಶೀರ ಮುಲ್ಲಾ, ರಿಯಾಜ್ ಮುಲ್ಲಾ, ಲಾಲಸಾಬ ಮುಲ್ಲಾ, ರಾಜು ಮುಲ್ಲಾ, ಮೈನುದಿನ್ ಮುಲ್ಲಾ, ಆರೀಫ್ ಮುಲ್ಲಾ, ಶಕೀಲ ಮುಲ್ಲಾ, ರಶೀದ ಮೊರಟಗಿ ಎಂಬವರು ಹತ್ಯೆ ಮಾಡಿದ್ದಾರೆ. ಆದರೆ ಪ್ರಶಾಂತ ಹತ್ಯೆಗೆ ಕಾರಣವನ್ನು ತಿರುಚಿರುವ ಪೊಲೀಸರು ಪ್ರೇಮದ ವಿಷಯಕ್ಕೆ ಹತ್ಯೆ ಮಾಡಿರುವುದಾಗಿ ಕೇಸ್ ದಾಖಲಿಸಿದ್ದಾರೆ. ಆಲಮೇಲ ಪೊಲೀಸರಿಂದ ಪ್ರಕರಣ ಮುಚ್ಚಿಹಾಕುವ ಯತ್ನ ನಡೆದಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಹತ್ಯೆ ಖಂಡಿಸಿ ಕ್ಷತ್ರೀಯ ಒಕ್ಕೂಟ, ಕಡುಬು, ಕಟಬರ ಅಲೆಮಾರಿ ಒಕ್ಕೂಟದಿಂದ ವಿಜಯಪುರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದು, ಸಿಐಡಿ ತನಿಖೆಗೆ ಆಗ್ರಹಿಸಿದ್ದಾರೆ.










