ಈ ಪ್ರೀತಿ ಪ್ರೇಮ ಅನ್ನೋದೆ ಹಾಗೆ… ಯಾವ ಹೊತ್ತಲ್ಲಿ ಯಾರ ಮೇಲೆ ಪ್ರೀತಿ ಚಿಗುರುತ್ತೆ ಅನ್ನೋಕಾಗಲ್ಲ… ಇದಕ್ಕೆ ಹೇಳೋದು ಪ್ರೀತಿ ಒಂದು ಕುರುಡು ಅಂತ.
ಸ್ವತಃ ತನ್ನ ಅಕ್ಕನ ಗಂಡ ಅಂದರೆ ಬಾವನನ್ನೇ ಪ್ರೀತಿಸಿದ ವಿದ್ಯಾವಂತೆಯೊಬ್ಬಳು, ಹಠಕ್ಕೆ ಬಿದ್ದು ಆತನನ್ನು ಮದುವೆ ಆಗಿದ್ದಳು. ಕೊನೆಗೆ ಕೈಹಿಡಿದ ಗಂಡನನ್ನು ಬಿಟ್ಟು ಕೊರಿಯರ್ ಬಾಯ್ ನನ್ನು ಪ್ರೀತಿಸಿದ ಆಕೆ, ಆತನನ್ನೂ ಮದುವೆ ಮಾಡಿಕೊಂಡು ಒಂದೆಡೆ ಕಾನೂನು ತೊಡಕು, ಮತ್ತೊಂದೆಡೆ ತಂದೆ ತಾಯಿಯ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
ಈ ಕಥಾನಕದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಮಹಿಳಾ ಠಾಣೆ ಮುಂದೆ ನಮ್ಮ ಮಗಳನ್ನು ನಮ್ಮ ಜೊತೆ ಕಳುಹಿಸಿ ಕೊಡಿ ಅಂತ ಆ ಇಬ್ಬರು ಗಂಡಂದಿರ ಮುದ್ದಿನ ಹೆಂಡತಿಯ ವೃದ್ದ ತಂದೆ ತಾಯಿ, ಅತ್ತು ಕರೆದು ಗೋಳಾಡಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮಣಿಗಾನಹಳ್ಳಿ ನಿವಾಸಿ ಜಯಮ್ಮ ಹಾಗೂ ವಿ ನಾರಾಯಣಪ್ಪ ದಂಪತಿಗೆ ಮೂರು ಜನ ಹೆಣ್ಣು ಮಕ್ಕಳು. ಅದರಲ್ಲಿ ದೊಡ್ಡ ಮಗಳು ಮಂಜುಳಾಳನ್ನು ಆಂಧ್ರದ ವಿ ಕೋಟೆ ಗ್ರಾಮದ ಸುಬ್ರಮಣ್ಯಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದರು.
ಮಂಜುಳಾರ ಕೊನೆಯ ತಂಗಿಯೇ ದಿವ್ಯಾ. ದಿವ್ಯಾ ಸ್ವತಃ ತನ್ನ ಅಕ್ಕನ ಗಂಡ ಬಾವ ಸುಬ್ರಮಣ್ಯ ನನ್ನು ಪ್ರೀತಿಸಿದಳು. ಕಾಡಿ ಬೇಡಿ ಅತ್ತು ಕರೆದು ಭಾವನನ್ನೇ ಮದುವೆ ಮಾಡಿಕೊಂಡಿದ್ದಳು. ಆದರೆ ಮದುವೆಯಾಗಿ ಕೇವಲ ಹತ್ತು ತಿಂಗಳು ಅಷ್ಟೆ… ಅಷ್ಟರಲ್ಲೆ ಹೊಸದಾಗಿ ಪರಿಚಯ ಆದ ಕೊರಿಯರ್ ಬಾಯ್ ಚಂದ್ರಶೇಖರ್ ಎನ್ನುವವನನ್ನು ಪ್ರೀತಿಸತೊಡಗಿದಳು. ಮನೆಯವರ ವಿರೋಧದ ನಡುವೆ ಮದುವೆಯೂ ಮಾಡಿಕೊಂಡಳು. ಇದರಿಂದಾಗಿ ದಿವ್ಯಾ ಪೋಷಕರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ದಿವ್ಯಾ ಡಬಲ್ ಗ್ರಾಜ್ಯುವೇಟ್!
ಅಸಲಿಗೆ ಈ ಕಿರಾತಕಿ ದಿವ್ಯಾ ಡಬಲ್ ಗ್ರಾಜ್ಯುವೇಟ್! ದಿವ್ಯಾ ಬಿ.ಎಡ್. ಎಂ.ಎಸ್ಸಿ ವಿದ್ಯಾಭ್ಯಾಸ ಮಾಡಿದ್ದು, ಮುಳಬಾಗಿಲಿನ ಡಿ.ಸಿ.ಸಿ ಬ್ಯಾಂಕ್ ನಲ್ಲಿ ಸೀನಿಯರ್ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಳು. ಮದುವೆಯಾಗಿ ಕೆಲ ತಿಂಗಳಲ್ಲೆ ಕೋಲಾರದ ಕೆ.ಜೆ.ಎಫ್ ನ ಕಂಬಂಪಲ್ಲಿ ನಿವಾಸಿ 29 ವರ್ಷದ ಕೊರಿಯರ್ ಬಾಯ್ ಚಂದ್ರಶೇಖರ್ ಗೆ ಪರಿಚಯವಾಗಿದ್ದಾಳೆ. ಪ್ರೀತಿ ಪ್ರೇಮ ಅಂತಾ ಸುತ್ತಾಡಿದ್ದಾಳೆ. ಇದ್ದನ್ನರಿತ ಆಕೆಯ ಪೋಷಕರು ಮಗಳು ದಿವ್ಯಾಳನ್ನು ಕೋಲಾರ ಜಿಲ್ಲೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಡಿ.ಸಿ.ಸಿ ಬ್ಯಾಂಕ್ ಗೆ ವರ್ಗಾವಣೆ ಮಾಡಿಸಿದ್ದರು.
ಅಲ್ಲಿಯೂ ದಿವ್ಯ ಜೋಡಿ ತನ್ನ ಪ್ರೇಮ ಪುರಾಣ ಮುಂದುವರೆಸಿದೆ. ದಿವ್ಯಾ-ಚಂದ್ರಶೇಖರ್ ಪ್ರೇಮಕ್ಕೆ, ಮರು ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾದ ಕಾರಣ ಇಬ್ಬರೂ ಇದ್ದಕ್ಕಿದ್ದಂತೆ ಓಡಿಹೋಗಿದ್ದರು. ಇದರಿಂದ ಆಕೆಯ ಪೋಷಕರು ಚಿಕ್ಕಬಳ್ಳಾಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲು ಮಾಡಿದರು. ಪೊಲೀಸರು ಇಬ್ಬರನ್ನೂ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. ಇಬ್ಬರೂ ಜೂನ್ 10ರಂದೇ ಮದುವೆ ಆಗಿದ್ದು, ಆಗಸ್ಟ್ 10ರಂದು ಬಂಗಾರಪೇಟೆಯಲ್ಲಿ ಮದುವೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಿಂದ ತಮ್ಮನ್ನು ತಮ್ಮ ಪಾಡಿಗೆ ಬದುಕಲು ಬಿಡಿ ಅಂತ ಪೊಲೀಸರು ಹಾಗೂ ತಂದೆ ತಾಯಿಯ ಎದುರು ಗೋಗರೆದಿದ್ದಾರೆ.
ದಿವ್ಯಾ ಪೋಷಕರು ಸುಮಾರು 15 ಲಕ್ಷ ರೂಪಾಯಿ ಖರ್ಚು ಮಾಡಿ ಮಗಳಿಗೆ ಬಾವನ ಜೊತೆಯೇ ಮೊದಲ ಮದುವೆ ಮಾಡಿಸಿದ್ದರು. ದಿವ್ಯಾಳಿಗೆ ಡಿ.ಸಿ.ಸಿ ಬ್ಯಾಂಕ್ ನಲ್ಲಿ ಉದ್ಯೋಗವನ್ನೂ ಕೊಡಿಸಿದ್ದರಂತೆ! ಆದ್ರೆ ಭಾವನ ಜೊತೆ ಮದುವೆ ಬೇಡ ಅಂದರೂ ಕೇಳಿರಲಿಲ್ಲ. ಈಗ ಬಾವನನ್ನು ಬಿಟ್ಟು ಬೇರೊಬ್ಬರ ಜೊತೆ ಮದುವೆ ಆಗುವುದಕ್ಕೆ ವಿರೋಧವಿದ್ದರೂ ಕೇಳದ ದಿವ್ಯಾ, ಹೊಸ ಪ್ರಿಯತಮ ಚಂದ್ರಶೇಖರನ ಜೊತೆ ಲವ್ವಿಡವ್ವಿ ಮಾಡಿ ಮದುವೆ ಆಗಿ, ಒಂದೆಡೆ ಕಾನೂನು ತೊಡಕು, ಮತ್ತೊಂದೆಡೆ ಮನೆಯವರ ವಿರೋಧ ಕಟ್ಟಿಕೊಂಡಿದ್ದಾಳೆ. ಪ್ರೀತಿಸಿದ ಚಂದ್ರುವಿನ ಜೊತೆಯೇ ಹೋಗಿದ್ದಾಳೆ. ಈ ಪ್ರೇಮ ಕಥೆ ಮುಂದೆ ಏನು ತಿರುವು ಪಡೆಯುತ್ತೆ ಅಂತ ಕಾದು ನೋಡಬೇಕಾಗಿದೆ.