ಮೈಸೂರು: ಪರಿಶಿಷ್ಟ ಸಮುದಾಯದ ಮಹಿಳೆಯನ್ನು ವಂಚಿಸಿ, ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ, ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಸ್ಯಾಂಟ್ರೋ ರವಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಸ್ಯಾಂಟ್ರೋ ರವಿ ವಿರುದ್ಧ 2ನೇ ಪತ್ನಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಸಂಬಂಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದಾದ ಬಳಿಕ ಸ್ಯಾಂಟ್ರೋ ರವಿ ತಲೆಮರೆಸಿಕೊಂಡಿದ್ದ. 11 ದಿನಗಳ ಬಳಿಕ ಕೊನೆಗೂ ಗುಜರಾತ್ನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ನಿಯ ಆರೋಪಗಳೇನು?
ತನಗೆ ಲೈಂಗಿಕ ಸೋಂಕು ಇದೆ ಎಂಬುದು ಗೊತ್ತಿದ್ದರೂ ಆರೋಪಿ ಪತಿ ನನಗೂ ಕೂಡ ಸೋಂಕನ್ನು ತಗುಲಿಸಿದ್ದಾನೆ. ಸೋಂಕು ಪ್ರಾಣಾಪಾಯಕಾರಿಯಾಗಿದ್ದು, ಔಷಧಿ ಇಲ್ಲ. ವರದಕ್ಷಿಣೆ ಕಿರುಕುಳ ನೀಡಿ, ಒತ್ತಾಯಪೂರ್ವಕ ಗರ್ಭಪಾತ ಮಾಡಿಸಿದ್ದಾನೆ. ಹಣದ ದುರಾಸೆಗೆ ಬಿದ್ದು ಮತ್ತೊಬ್ಬರೊಂದಿಗೆ ಲೈಂಗಿಕ ಸಂಪರ್ಕ ಮಾಡುವಂತೆ ಒತ್ತಾಯಿಸಿದ್ದಾನೆ. ಆರೋಪಿಯು ಉದ್ಯೋಗ ನೀಡುವ ನೆಪದಲ್ಲಿ ಕರೆಸಿಕೊಂಡು ಮತ್ತು ಬರುವ ಜ್ಯೂಸ್ ನೀಡಿ, ಪ್ರಜ್ಞಾವಸ್ಥೆ ಕಳೆದುಕೊಂಡ ಬಳಿಕ ಅತ್ಯಾಚಾರ ನಡೆಸಿದ್ದ. ನನ್ನ ಬೆತ್ತಲೆ ಫೋಟೋಗಳನ್ನು ತೆಗೆದು ಬೆದರಿಕೆ ಹಾಕಿದ್ದ. ನಂತರ ಮದುವೆಯಾದ. ಮದುವೆಯಾದ ಬಳಿಕವೂ ಹಿಂಸೆ ನೀಡಿದ ಎಂದು ಪತ್ನಿ ಆರೋಪಿಸಿದ್ದರು.
ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲೂ ಸ್ಯಾಂಟ್ರೋ ರವಿ ಹೆಸರು ಕೇಳಿಬಂದಿತ್ತು. ಬಿಜೆಪಿ ಸಚಿವರ ಜೊತೆ ಕಾಣಿಸಿಕೊಂಡಿರುವ ಫೋಟೋಗಳು ಕೂಡ ವೈರಲ್ ಆಗಿದ್ದವು. “ಸಿಎಂ ಕೂಡ ನನ್ನನ್ನು ಸರ್ ಎನ್ನುತ್ತಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರಿಗೆ ಸ್ಯಾಂಟ್ರೋ ರವಿ ಧಮ್ಕಿ ಹಾಕಿದ್ದ ಆಡಿಯೋ ಕೂಡ ವೈರಲ್ ಆಗಿತ್ತು. ಹೀಗಾಗಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಕಿಡಿಕಾರಿದ್ದವು.
ಮೈಸೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಈ ವೇಳೆ, “ಸ್ಯಾಂಟ್ರೋ ರವಿ ಬಂಧನದ ನಂತರವೇ ನಾನು ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತೇನೆ. ಸ್ಯಾಂಟ್ರೋ ರವಿ ಬಂಧನವಾಗುವರೆಗೂ ನಾನು ಮೈಸೂರಿನಲ್ಲೇ ಇರುತ್ತೇನೆ. ಶೀಘ್ರದಲ್ಲೇ ಸ್ಯಾಂಟ್ರೋ ರವಿ ಬಂಧನದ ಸಿಹಿ ಸುದ್ದಿ ಕೊಡುತ್ತೇವೆ ಅಂತಾ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದರು.