ಇತ್ತೀಚಿಗಿನ ದಿನಗಳಲ್ಲಿ ತೃತೀಯ ಲಿಂಗಿಯರಿಗೆ ಸಮಾಜದಲ್ಲಿ ಸ್ಥಾನ ಮಾನ ಸಿಗುವ ಕೆಲಸ ನಡೆಯುತ್ತಿದೆ. ಇವರು ಸಹ ಸಮಾಜದಲ್ಲಿ ತಾವು ಭಿನ್ನವಾಗಿದ್ದರೂ ಗೌರವಯುತ ಬದುಕು ಕಟ್ಟುವ ಕನಸು ಕಂಡು ಯಶಸ್ವಿಯೂ ಆದ ಉದಾಹರಣೆ ಇವೆ. ಕರಾವಳಿ ಮತ್ತೆ ಹೊಸ ಭಾಷ್ಯಕ್ಕೆ ಅಣಿಯಾಗಲಿದೆ. ಮಂಗಳೂರಿನ ಐವರು ತೃತೀಯ ಲಿಂಗಿಗಳು ಇತಿಹಾಸದಲ್ಲೇ ಪ್ರಪ್ರಥಮ ಬಾರಿ ಯಕ್ಷಗಾನ ಆಯೋಜಿಸಿ ಶ್ರೀದೇವಿಯ ಸೇವೆ ಮಾಡಲು ನಿರ್ಧರಿಸಿದ್ದಾರೆ.
ಮಂಗಳೂರಿನ ಕೋಡಿಕಲ್ ಕಟ್ಟೆ ಮೈದಾನದಲ್ಲಿ ಫೆ.25ರಂದು ಸಾಯಂಕಾಲ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಮಂಡಳಿಯವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ. ಅಶೋಕನಗರ, ದಂಬೇಲ್ನಲ್ಲಿ ವಾಸವಿರುವ ತೃತೀಯ ಲಿಂಗಿ ಐಶ್ವರ್ಯ ಪರಿವಾರದವರು ಈ ಯಕ್ಷಗಾನ ಆಯೋಜಿಸಿದ್ದಾರೆ.
ದೇಣಿಗೆ ಪಡೆಯದೆ ತಾವು ಕೆಲಸ ಮಾಡಿ ಸಂಪಾದನೆ ಮಾಡಿ ಉಳಿಸಿದ ಹಣ ದೇವಿಯ ಸೇವೆಗೆ ವಿನಿಯೋಗಿಸಲು ಮುಂದಾಗಿದ್ದಾರೆ. ಸುಮಾರು 1,500ದಷ್ಟು ಜನ ಸೇರಲಿದ್ದು, ಅಷ್ಟೂ ಜನರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗುತ್ತಿದೆ. ಇವರ ನಡೆಗೆ ಮೆಚ್ಚುಗೆ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಕುಲಶೇಖರದಲ್ಲಿ ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದ್ದರೂ, ಮನೆಯಿಂದ ದೂರ ಮಾಡಿದರು. ಮಂಗಳಾದೇವಿ, ಪಂಪ್ವೆಲ್ ಮೊದಲಾದೆಡೆಯ ಐವರು ಬಾಡಿಗೆ ಮನೆಯಲ್ಲಿ ಜತೆಯಾಗಿ ವಾಸಿಸುತ್ತಿದ್ದಾರೆ. ಇವರೆಲ್ಲರೂ ಪದವೀಧರರಾಗಿದ್ದು ಸೆಕ್ಸ್ ವರ್ಕ್ ಮಾಡದೆ ಗೌರವಯುತವಾಗಿ ಖಾಸಗಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ದುಂದು ವೆಚ್ಚ ಮಾಡದೆ ಉಳಿತಾಯ ಮಾಡಿ ಒಳ್ಳೆಯ ಕೆಲಸಗಳಿಗೆ ಉಪಯೋಗಿಸುತ್ತಿದ್ದೇವೆ ಎಂದು ಐಶ್ವರ್ಯ ಹೇಳಿದ್ದಾರೆ.