ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ಶ್ರೀ ಪದ್ಯಾಣ ಗಣಪತಿ ಭಟ್ (66) ವಯೋ ಸಹಜ ಖಾಯಿಲೆಯಿಂದ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದರು.
ಪದ್ಯಾಣರು ಪತ್ನಿ ಶೀಲಾಶಂಕರಿ, ಮಕ್ಕಳಾದ ಸ್ವಸ್ತಿಕ್, ಕಾರ್ತಿಕ್ ,ನೂರಾರು ಶಿಷ್ಯಂದಿರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.
ಎರಡು ವರ್ಷಗಳ ಹಿಂದೆ ಇವರು ಪ್ರಯಾಣಿಸುತ್ತಿದ್ದ ಕಾರು ಪುತ್ತೂರು ತಾಲೂಕಿನ ತಿಂಗಳಾಡಿ ಸಮೀಪದ ಎಂಡೆಸಾಗು ಎಂಬಲ್ಲಿ ಅಪಘಾತಕ್ಕಿಡಾಗಿತ್ತು. ಆ ಆಪಘಾತದ ವೇಳೆ ಗಾಯಳುವಾಗಿದ್ದ ಅವರು ಆ ಬಳಿಕ ಅವರು ಒಂದಷ್ಟು ಚೇತರಿಸಿಕೊಂಡಿದ್ದರಾದರೂ ಆ ಬಳಿಕ ಅವರನ್ನು ವಯೋ ಸಹಜ ಅನಾರೋಗ್ಯಗಳು ನಿರಂತರವಾಗಿ ಕಾಡಿದ್ದವು.
ಶ್ರೀ ಪದ್ಮಾಣ ಗಣಪತಿ ಭಟ್ಟರು 1955 ಜನವರಿ 21ರಂದು ಸುಳ್ಯ ತಾಲೂಕಿನ ಕಲ್ಮಡ್ಕದ ಸಮೀಪ ಗೋಳ್ತಜೆ ಎಂಬಲ್ಲಿ ಪದ್ಮಾಣ ತಿರುಮಲೇಶ್ವರ ಭಟ್, ಸಾವಿತ್ರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು.
ಶ್ರೀ ಪದ್ಯಾಣ ಗಣಪತಿ ಭಟ್ಟರು ತೆಂಕುತಿಟ್ಟಿನ ಶ್ರೇಷ್ಠ ಭಾಗವತರಲ್ಲೊಬ್ಬರು. ಪ್ರಸ್ತುತ ಶ್ರೀ ಹನುಮಗಿರಿ ಮೇಳದ ಪ್ರಧಾನ ಭಾಗವತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈಟಿವಿಯ “ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ಮೊದಲ ಯಕ್ಷಗಾನ ಭಾಗವತ ಎಂಬ ಹೆಗ್ಗಳಿಕೆ ಇವರದು. ಇವರ ಗಾಯನವನ್ನು ನೋಡಿ ಕಾರ್ಯಕ್ರಮದ ನಿರ್ವಾಹಕ ಡಾ| ಎಸ್.ಪಿ. ಬಾಲಸುಬ್ರಹ್ಮಣ್ಯ ಅವರು ಪ್ರಶಂಸಿದ್ದರು.
ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪದ್ಯಾಣರು ಒಲಿದಿತ್ತು. ದುಬೈ, ಮಸ್ಕತ್, ಕುವೈಟ್ ಹೀಗೆ ವಿದೇಶಗಳಲ್ಲಿ ಪ್ರದರ್ಶನ ನೀಡಿ ಸನ್ಮಾನಗಳನ್ನು ಪಡೆದಿದ್ದಾರೆ. ಮುಂಬೈ, ದಿಲ್ಲಿ, ಕಾಸರಗೋಡು, ಶಿವಮೊಗ್ಗ, ಮಂಗಳೂರು ಸೇರಿದಂತೆ ದೇಶಾದ್ಯಂತ ಹಲವೆಡೆ ಅಭಿಮಾನಿಗಳ ಗೌರವ ಸಮ್ಮಾನಗಳನ್ನು ಅವರು ಸ್ವೀಕರಿಸಿದ್ದಾರೆ.