ಕಾಸರಗೋಡು: ತೆಂಕುತಿಟ್ಟಿನ ಹಿರಿಯ ವೇಷಧಾರಿ ಕೆ ವಿಶ್ವಜ್ಞ ಶೆಟ್ಟಿ ಪ್ರಶಸ್ತಿ ಪಡೆದ ಮಂಗಲ್ಪಾಡಿ ಮಹಾಬಲ ಶೆಟ್ಟಿ ನಿಧನರಾಗಿದ್ದಾರೆ.
ಉಪ್ಪಳ ಕೃಷ್ಣ ಮಾಸ್ತರ್ ಅವರಿಂದ ಯಕ್ಷಗಾನ ನಾಟ್ಯಾಭ್ಯಾಸವನ್ನು ಮಾಡಿ ಭಗವತಿ ಮೇಳ ಉಪ್ಪಳ, ಮಲ್ಲ ಮೇಳ, ಮಧೂರು ಮೇಳ, ಬೇಳ್ಮಣ್ಣು, ಕಟೀಲು, ಸುಂಕದಕಟ್ಟೆ ಮೇಳಗಳಲ್ಲಿ ಮೂರೂವರೆ ದಶಕಗಳ ಕಲಾಸೇವೆ ನಡೆಸಿ ಅನಾರೋಗ್ಯ ನಿಮಿತ್ತ ವೃತ್ತಿ ಬದುಕಿಗೆ ವಿದಾಯ ಹಾಡಿದ್ದರು.
ಕನ್ನಡ ಹಾಗೂ ತುಳು, ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳಲ್ಲಿ ಹೆಚ್ಚಾಗಿ ಖಳ ನಾಯಕನ ಪಾತ್ರದಲ್ಲೇ ಮಿಂಚಿದವರು.
ಶನಿ, ದಕ್ಷ, ಗದಾಯುದ್ಧದ ಕೌರವ, ಚಂದುಗಿಡಿ, ಪಾತ್ರಗಳು ಇವರಿಗೆ ಹೆಚ್ಚಿನ ಖ್ಯಾತಿ ತಂದಿತ್ತು .ಯಕ್ಷ ಭಾರತಿ ಮಂಗಲ್ಪಾಡಿ ಸಂಘಟನೆಯಲ್ಲಿ ಸಕ್ರಿಯ ರಾಗಿ ತೊಡಗಿಸಿ ಕೊಂಡಿದ್ದ ಮಹಾಬಲ ಶೆಟ್ಟರು ಬಿಡುವಿನ ವೇಳೆಯಲ್ಲಿ ಕೃಷಿ ಕಾಯಕದಲ್ಲಿ ನಿರತರಾಗಿದ್ದರು.
ಮಂಗಲ್ಪಾಡಿ ಮಹಾಬಲ ಶೆಟ್ಟರಿಗೆ ಉಡುಪಿ ಕಲಾರಂಗದ ವಿಶ್ವಜ್ಞ ಶೆಟ್ಟಿ ಪ್ರಶಸ್ತಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ನಗದು ಪುರಸ್ಕಾರ, ಬರಂಗಾರ ಪ್ರಕಾಶ ಶೆಟ್ಟಿ ಟ್ರಸ್ಟ್ ಪುರಸ್ಕಾರ, ಜಿ ಶಂಕರ ಸಹಾಯಧನ, ಯಕ್ಷ ಬಳಗ ಹೊಸಂಗಡಿ ವಾರ್ಷಿಕ ಸನ್ಮಾನ, ರಾಮ ಚಂದ್ರ ಹೆಗ್ಡೆ ವೇದಿಕೆ ಬೆಜ್ಜ ಸಂಸ್ಥೆಯಿಂದ ಸನ್ಮಾನ ಹೀಗೆ ನಾಡಿನಾದ್ಯಂತ ನೂರಾರು ಗೌರವಾದರಗಳು ಲಭಿಸಿವೆ.
ಪುತ್ರ ಜಗನ್ನಿವಾಸ ಶೆಟ್ಟಿ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ, ರಂಗಭೂಮಿ ಕಲಾವಿದರಾಗಿ ಖ್ಯಾತರು.
ಮಂಗಲ್ಪಾಡಿ ಮಹಾಬಲ ಶೆಟ್ಟರ ಅಲುವಿಕೆ ಯಕ್ಷಗಾನ ಕ್ಷೇತ್ರಕ್ಕೆ ಅದರಲ್ಲೂ ಮುಖ್ಯವಾಗಿ ಗಡಿನಾಡ ಕಲಾ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟಾಗಿದೆ.
ಮಹಾಬಲ ಶೆಟ್ಟರು ಪತ್ನಿ ದೇವಕಿ ಎಂ. ಶೆಟ್ಟಿ, ಮಗ ಜಗನ್ನಿವಾಸ ಶೆಟ್ಟಿ, ಮಗಳು ಪೂರ್ಣಿಮಾ ಶೆಟ್ಟಿ, ಸೊಸೆ ಪ್ರತಿಮಾ ಜೆ ಶೆಟ್ಟಿ, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.