ಮಳೆಗಾಲ ನಿಲ್ಲುತ್ತಲೇ ಇಲ್ಲ.. ಇನ್ನೇನು ಒಂದೂವರೆ ತಿಂಗಳಿನಲ್ಲಿ ಹೊಸ ವರ್ಷ ಬರಲಿದೆ. ಏಪ್ರಿಲ್ ನಿಂದ ಆರಂಭಗೊಂಡ ಮಳೆಗಾಲ ನಡು ನಡುವೆ ವಿರಾಮ ನೀಡಿದ್ರು ಈ ಬಾರಿ ಚೆನ್ನಾಗಿ ಮಳೆ ಬಂದಿದೆ. ಆಪತ್ತು ಕೂಡ ಹೇಳತೀರದು. ಪ್ರವಾಹ, ಹೆಚ್ಚಿದ ನೆರೆ, ಬಿರುಗಾಳಿ ಹೀಗೆ ಜನರನ್ನು ನಿದ್ದೆಗೆಡಿಸಿತ್ತು.
ಇದೆಲ್ಲಾ ಚಂಡಮಾರುತದ ಎಫೆಕ್ಟ್
ಏಪ್ರಿಲ್ ಆರಂಭದಲ್ಲಿ ಶುರುವಾದ ಚಂಡಮಾರುತವನ್ನು BOB 01 ಎಂದು ಗುರುತಿಸಲಾಗಿತ್ತು. ದಕ್ಷಿಣ ಭಾರತಕ್ಕೆ ಎಂಟ್ರಿ ಕೊಟ್ಟ ಈ ಸೈಕ್ಲೋನ್ 45 ಕಿ.ಮೀ ವೇಗದಲ್ಲಿ ಬೀಸಿತ್ತು. ಇದಾದ ನಂತರ ಪ್ರಬಲ ಚಂಡಮಾರುತ ಅರ್ಧಕರ್ಧ ಭಾರತದ ಜನರ ನಿದ್ದೆಯನ್ನು ಕೆಡಿಸಿತ್ತು.
ಅದೇ ತೌಕ್ತೇ ಚಂಡಮಾರುತ. ಗಂಟೆಗೆ 185 ಕಿಮೀನಲ್ಲಿ ಬೀಸಿ ಬೊಬ್ಬಿರಿದಿದ್ದ ಈ ಸೈಕ್ಲೋನ್ ಹೊಡೆತಕ್ಕೆ ಸಾವಿರಾರು ಜನರು ಸೂರು ಕಳೆದುಕೊಂಡರು. ನೂರಾರು ಜೀವಗಳು ಬಲಿಯಾದವು. ದೆಹಲಿ, ಕೇರಳ, ಲಕ್ಷದ್ವೀಪ, ಮಾಲ್ಡೀವ್, ಹರ್ಯಾಣ, ಕರ್ನಾಟಕ ಹೀಗೆ ನಾನಾ ರಾಜ್ಯಗಳು ತೌಖ್ತೇ ಹೊಡೆತಕ್ಕೆ ತತ್ತರಿಸಿ ಹೋಗಿದ್ದವು.
ಇದಾದ ನಂತರ ಯಾಸ್, BOB 03 ಗುಲಾಬ್, ಶಾಹೀನ್, ARB 03 ಚಂಡಮಾರುತವು ಜನರನ್ನು ಸಂಕಷ್ಟಕ್ಕೆ ದೂಡಿತ್ತು. ಅಕಾಲಿಕ ಮಳೆ ರೈತರನ್ನು ಕಂಗೆಡಿಸಿದರೆ, ನದಿ ತೊರೆಗಳು ಉಕ್ಕಿ ಹರಿದು ಸಾವಿರಾರು ಜನರನ್ನು ಅತಂತ್ರಗೊಳಿಸಿತ್ತು.
ನಷ್ಟ, ಸಾವಿಗೀಡಾದವರು ಎಷ್ಟು..?
ಈವರೆಗೆ 7 ಚಂಡಮಾರುತ ಬೀಸಿದ್ದು ಇದರಿಂದಾಗಿ ಒಟ್ಟು 39 ಕೋಟಿ 39 ಲಕ್ಷದಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 230 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.