ಬಂಟ್ವಾಳ: ಜಿಲ್ಲಾ ಪಂಚಾಯತ್ ಗಳ ಚುನಾವಣೆಗೆ ಆಡಳಿತ ಅವಧಿ ಮುಕ್ತಾಯಗೊಂಡಿರುವ ಬಗ್ಗೆ ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ.
ಬಂಟ್ವಾಳ, ಕಡಬ, ಪುತ್ತೂರು, ಸುಳ್ಯ, ಬೆಳ್ತಂಗಡಿ ಸಹಿತ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮತ್ತು ದ.ಕ. ಜಿಲ್ಲಾ ವ್ಯಾಪ್ತಿಯ ಎಲ್ಲಾ ತಾಲೂಕು ಪಂಚಾಯತ್ಗಳಿಗೆ ಚುನಾವಣೆ ನಡೆದು ನೂತನ ಆಡಳಿತ ಅಸ್ತಿತ್ವಕ್ಕೆ ಬರಬೇಕಿತ್ತು. ಆದರೆ, ಕೊರೋನಾದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿಕೆಯಾಗಿದೆ.
ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಲು ಸಿದ್ಧತೆ ನಡೆಸಿರುವ ರಾಜ್ಯ ಚುನಾವಣಾ ಆಯೋಗ ಜಿಲ್ಲಾ ಪಂಚಾಯತ್ ಚುನಾವಣೆಗೆ ಕ್ಷೇತ್ರವಾರು ಮೀಸಲಾತಿ ಪ್ರಕಟಿಸಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳು 2021ರ ನಿಯಮ 6 ಅನ್ವಯ ಹೊರಡಿಸಲಾಗಿರುವ ಜಿ.ಪಂ ಕ್ಷೇತ್ರವಾರು ಮೀಸಲಾತಿ ಪ್ರಕಟಣೆಯ ಅಧಿಸೂಚನೆಗೆ ಆಕ್ಷೇಪ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪೂರಕ ದಾಖಲೆಗಳೊಂದಿಗೆ ಆಕ್ಷೇಪಣೆಗಳನ್ನು ಸಲ್ಲಿಸುವುದಾದರೆ ಜುಲೈ 8ರೊಳಗೆ ಕಾರ್ಯದರ್ಶಿ ಚುನಾವಣಾ ಆಯೋಗ 1ನೇ ಮಹಡಿ ಕೆಎಸ್ಸಿಎಂಎಫ್ ಕಟ್ಟಡ(ಹಿಂಭಾಗ) ಕನ್ನಿಂಗ್ಹ್ಯಾಮ್ ರಸ್ತೆ ಬೆಂಗಳೂರು 560052 ರವರಿಗೆ ತಲುಪಿಸುವಂತೆ ಸಲ್ಲಿಸಬೇಕು. ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಂ.ಪಿ. ರಂಜಿತಾರವರ ಹೆಸರಿನಲ್ಲಿ ಪ್ರಕಟಣೆ ಹೊರಡಿಸಲಾಗಿದೆ.
ಬಂಟ್ವಾಳ ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿ ವಿವರಗಳು ಇರಾ(ಸಾಮಾನ್ಯ), ಕಾವಳಪಡೂರು(ಹಿಂದುಳಿದ ವರ್ಗ ಅ ಮಹಿಳೆ), ನಾವೂರು(ಸಾಮಾನ್ಯ ಮಹಿಳೆ), ವಿಟ್ಲಪಡ್ನೂರು(ಸಾಮಾನ್ಯ), ಪುಣಚ( ಹಿಂದುಳಿದ ವರ್ಗ ಅ).ಇದೀಗ ಜಿ.ಪಂ. ಚುನಾವಣೆಗೆ ಕರಡು ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದ್ದು ಜುಲೈ 8ರವರೆಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದ್ದು, ಬಳಿಕ ಮೀಸಲಾತಿ ಪಟ್ಟಿ ಅಂತಿಮಗೊಳ್ಳಲಿದೆ. ಇದೀಗ ಪ್ರಕಟಗೊಂಡಿರುವ ಮೀಸಲಾತಿ ಪಟ್ಟಿಯೇ ಬಹುತೇಕ ಅಂತಿಮಗೊಳ್ಳಲಿರುವುದರಿಂದ ಈಗಾಗಲೇ ಕ್ಷೇತ್ರವಾರು ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಚರ್ಚೆ ಆರಂಭಗೊಂಡಿದೆ.