ಚಿಕ್ಕಮಗಳೂರಿನ ದತ್ತ ಪೀಠದಲ್ಲಿ ನ್ಯಾಯಾಲಯದ ತೀರ್ಪಿನಂತೆ ಹಿಂದೂ ಆರ್ಚಕರನ್ನು ಶೀಘ್ರ ನೇಮಕ ಮಾಡುವಂತೆ ಹಾಗೂ ಇದೇ ಬರುವ ಡಿಸೆಂಬರ್ ತಿಂಗಳ 18ರಂದು ದತ್ತ ಪೀಠದಲ್ಲಿ ನಡೆಯುವ ದತ್ತ ಜಯಂತಿ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಆಗಮಿಸುವಂತೆ ಕೋರಿ ವಿಶ್ವಹಿಂದೂ ಪರಿಷತ್ ಬಜರಂಗದಳ ವತಿಯಿಂದ ಮನವಿ ಸಲ್ಲಿಸಲಾಯಿತು.
ದತ್ತ ಪೀಠವು ಹಿಂದಿನ ಹಲವು ವರ್ಷಗಳಿಂದ ಸರಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು ದುರ ದೃಷ್ಟವಶಾತ್ ಅಲ್ಲಿ ಮುಸಲ್ಮಾನ ಮೌಲ್ವಿಗಳು ಪೂಜೆ ಸಲ್ಲಿಸುತ್ತಿದ್ದು ಪ್ರಸ್ತುತ ಹೈಕೋರ್ಟ್ ನ ತೀರ್ಪಿನ ಪ್ರಕಾರ ಮೌಲ್ವಿಗಳ ನೇಮಕಾತಿಯನ್ನು ರದ್ದುಪಡಿಸಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಹಿಂದೂ ಸಮಾಜವು ಈ ಒಂದು ಅಪೇಕ್ಷೆಯನ್ನು ಮುಂದಿಟ್ಟುಕೊ0ಡು ಹೋರಾಟವನ್ನು ನಡೆಸುತ್ತಾ ಬಂದಿದೆ. ಹೈಕೋರ್ಟ್ನ ಈ ತೀರ್ಪು ಹಿಂದೂ ಸಮಾಜದಲ್ಲಿ ಸಂತಸವನ್ನು ತಂದಿದೆ. ಹಿಂದೂ ಸಮಾಜದ ನಂಬಿಕೆಗಳಿಗೆ ಬೆಲೆ ಸಿಕ್ಕಂತಾಗಿದೆ ಹಾಗೂ ನ್ಯಾಯಾಲಯದ ಈ ತೀರ್ಪು ಹಿಂದೂ ಸಮಾಜದ ಗೆಲುವಾಗಿದೆ.
ನ್ಯಾಯಾಲಯವು ನೀಡಿದ ತೀರ್ಪಿನಂತೆ ತಾವು ತಕ್ಷಣ ದತ್ತಪೀಠದಲ್ಲಿ ಹಿಂದು ಅರ್ಚಕರನ್ನು ನೇಮಿಸಬೇಕು ಹಾಗೂ 25 ವರುಷಗಳಿಂದ ಹಿಂದೂ ಸಮಾಜದ ಆಪೇಕ್ಷೆಯಂತೆ ಬಜರಂಗದಳವು ದತ್ತ ಪೀಠದಲ್ಲಿ ದತ್ತಜಯಂತಿ ಪ್ರಯುಕ್ತ ಪ್ರತಿವರ್ಷವೂ ದತ್ತಮಾಲಧಾರಣೆ ಹಾಗೂ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುತ್ತದೆ.
ಪ್ರತಿ ವರುಷದಂತೆ ಈ ವರುಷವೂ ಡಿ. 18ರಂದು ದತ್ತ ಜಯಂತಿಯ ಪ್ರಯುಕ್ತ ನಡೆಯುವ 3 ದಿನದ ಕಾರ್ಯಕ್ರಮಕ್ಕೆ ಸಂಪೂರ್ಣ ಹಿಂದೂ ಧಾರ್ಮಿಕ ವಿಧಿವಿಧಾನದಂತೆ ನಡೆಸಲು ಅನುವು ಮಾಡಿಕೊಡಬೇಕು ಹಾಗೂ ಈ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಆಗಮಿಸುವಂತೆ ಕೋರಿ ವಿಶ್ವಹಿಂದೂ ಪರಿಷತ್ ಬಜರಂಗದಳ ಪ್ರಮುಖರಾದ ಬಜರಂಗದಳ ಪ್ರಾಂತ ಸಂಯೋಜಕ್ ಸುನಿಲ್ ಕೆ ಆರ್, ಪ್ರಾಂತ ಸಹ ಸಂಯೋಜಕ್ ರಘು ಸಕಲೇಶಪುರ ಮತ್ತು ಪ್ರಾಂತ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತಡ್ಕ ಅವರ ಮುಖಾಂತರ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾ ಅವರು ಉಪಸ್ಥಿತರಿದ್ದರು.