ಶಾಸಕ ಡಾ.ಭರತ್ ಶೆಟ್ಟಿ ಮಾಜಿ ಶಾಸಕ ಮೊಯ್ದೀನ್ ಬಾವಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮೊಯ್ದೀನ್ ಬಾವಾ ಧರ್ಮಸ್ಥಳದಲ್ಲಿ ಹಾಗೂ ದರ್ಗಾದಲ್ಲಿ ಆಣೆ ಮಾಡಲು ಸಿದ್ದ ನೀವು ಬನ್ನಿ ಎಂದು ತಿರುಗೇಟು ನೀಡಿದ್ದಾರೆ.
ಶಾಸಕ ಭರತ್ ಶೆಟ್ಟಿ ಮೊಯ್ದೀನ್ ಬಾವಾ ಅವರು ದೇವಸ್ಥಾನದ ಪ್ರಸಾದವನ್ನು ಕಾಲಡಿಗೆ ಹಾಕಿ ತುಳಿದಿದ್ದಾರೆ ಎಂದು ಆರೋಪ ಮಾಡಿದ್ದರು. ಡಾ.ಭರತ್ ಶೆಟ್ಟಿಯವರ ಆರೋಪಕ್ಕೆ ನಾನು ಧರ್ಮಸ್ಥಳದಲ್ಲಿ ಹಾಗೂ ದರ್ಗಾದಲ್ಲಿ ಆಣೆ ಮಾಡಲು ಸಿದ್ಧ. ನಾನು ಬರುತ್ತೇನೆ ಅವರೂ ಬರಲಿ ಎಂದು ಬಾವಾ ಸವಾಲೆಸೆದಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ದೇವಾಲಯಗಳಿಗೆ ಈಗಲೂ ಪ್ರಸಾದ ಸ್ವೀಕರಿಸುತ್ತೇನೆ. ಇದಕ್ಕೆ ದಾಖಲೆಗಳಿವೆ ಎಂದಿದ್ದಾರೆ.
ನಾನು ನನ್ನ ಧರ್ಮದೊಂದಿಗೆ ಬೇರೆ ಧರ್ಮಗಳನ್ನು ಗೌರವಿಸುತ್ತೇನೆ. ನನ್ನ ಶಾಸಕತ್ವದ ಅವಧಿಯಲ್ಲಿ ದೇವಸ್ಥಾನ, ದೈವಸ್ಥಾನ, ಬಿಲ್ಲವ ಸಮುದಾಯ ಹಾಗೂ ಅಂಬೇಡ್ಕರ್ ಭವನಗಳಿಗೆ ಎಷ್ಟು ಅನುದಾನ ತಂದಿರುವುದಕ್ಕೆ ಆರ್ಟಿಐನಿಂದ ದಾಖಲೆ ತೆಗೆದುಕೊಂಡು ಪರಿಶೀಲಿಸಲಿ ಎಂದರು. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಕಾಟಿಪಳ್ಳದ ಶ್ರೀಗಣೇಶಪುರ ದೇವಸ್ಥಾನಕ್ಕೆ 58 ಕೋಟಿ ರೂಪಾಯಿ ಅನುದಾನವನ್ನು ನಾನು ತಂದಿದ್ದೆ. ಆ ಅನುದಾನವನ್ನು ಭರತ್ ಶೆಟ್ಟಿಯವರು ತನ್ನ ಅನುದಾನದಲ್ಲಿ 40 ಕೋಟಿಯನ್ನು ಬೇರೆ ವಾರ್ಡ್ ಗಳ ವಿವಿಧ ಕಾಮಗಾರಿಗಳಿಗೆ ಹಂಚಿರುವ ದಾಖಲೆ ನನ್ನಲ್ಲಿದೆ
ಹಿಂದುತ್ವದ ಪರವಾಗಿ ಮಾತನಾಡುವ ಶಾಸಕರು, ಹಿಂದುಗಳಿಗೆ ಎಷ್ಟು ಅನುದಾನ ತಂದಿದ್ದಾರೆಂದು ಪಟ್ಟಿ ಬಿಡುಗಡೆ ಮಾಡಲಿ. ಗೋಹತ್ಯೆ ವಿರೋಧಿಸುವ ಇವರು, ಕಪಿಲಾ ಗೋಶಾಲೆಯ ಎರಡು ಎಕ್ರೆ ಸ್ಥಳವನ್ನು ಕೋಸ್ಟಲ್ ಗಾರ್ಡ್ ಗೆ ನೀಡಿ ಶೆಡ್ ಒಡೆಯುವಾಗ ಗೋವುಗಳು ಮಳೆಯಲ್ಲಿ ನೆನೆಯುತ್ತಿದ್ದರೂ ಕನಿಕರ ತೋರಿಲ್ಲ. ಇವರು ವೈದ್ಯರಾಗಲು ಅನರ್ಹರು ಎಂದು ಕಿಡಿಕಾರಿದರು.