ತ್ರಿಶೂರು: ತಡವಾಗಿ ನಿದ್ದೆಯಿಂದ ಎಬ್ಬಿಸಿದರು ಎಂಬ ಕಾರಣಕ್ಕೆ ಸಿಟ್ಟಾದ ಮಗ ತಂದೆ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಕೇರಳದ ತ್ರಿಶೂರಿನ ಕೊಡನ್ನೂರಿನಲ್ಲಿ ನಡೆದಿದೆ.
ತಂದೆ ಜಾಯ್ ಕೊಲೆಯಾದವರು. ಮಗ ರಿಜೋ (25) ಕೊಲೆ ಮಾಡಿದಾತ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವೇಲ್ಡಿಂಗ್ ಕೆಲಸ ಮಾಡಿಕೊಂಡು ಜೀವನವನ್ನು ನಿಭಾಯಿಸುತ್ತಿದ್ದ ರಿಜೋ ಶುಕ್ರವಾರ ಸಂಜೆಯೇ ಕುಡಿದು ಮನೆಗೆ ಬಂದಿದ್ದಾನೆ. 5 ಗಂಟೆ ಸುಮಾರಿಗೆ ಮನೆಗೆ ಬಂದ ರಿಜೋ ತಂದೆ -ತಾಯಿಯ ಬಳಿ ತನ್ನನ್ನು 8:15ಕ್ಕೆ ಎಬ್ಬಿಸಿ ಎಂದು ಹೇಳಿ ಮಲಗಿದ್ದ.ತಂದೆ- ತಾಯಿ ಮಗನನ್ನು ರಾತ್ರಿ 8:30ಕ್ಕೆ ಎಬ್ಬಿಸಿದ್ದಾರೆ. ಈ ವೇಳೆ ಗಂಟೆ 8:30 ಆದದ್ದು ರಿಜೋನಿಗೆ ತಿಳಿದಿದೆ. ಈ ಕಾರಣಕ್ಕಾಗಿ ತಡವಾಯಿತೆಂದು ಪೋಷಕರ ಬಳಿ ಗಲಾಟೆ ಮಾಡಿದ್ದಾನೆ.
ಮಗನ ಜೋರು ಧ್ವನಿಗೆ ತಂದೆ ಸುಮ್ಮನಿರು ಎಂದು ಹೇಳಿ ಸಮಾಧಾನ ಮಾಡಲು ಹೋಗಿದ್ದಾರೆ.ಆದರೆ ಅಪ್ಪನ ಮಾತಿಗೆ ಸಿಟ್ಟಾದ ಮಗ ರಿಜೋ ತಂದೆಯ ಮೇಲೆ ಹಲ್ಲೆಗೈದಿದ್ದಾರೆ.ಈ ವೇಳೆ ತಂದೆ ನೆಲಕ್ಕೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಜಾಯ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಘಟನೆ ಬಳಿಕ ಆರೋಪಿ ರಿಜೋನನ್ನು ಪೊಲೀಸರು ಬಂಧಿಸಿದ್ದಾರೆ.