ಕನ್ನಡದ ಸಿನಿಮಾ ಹಾಗೂ ಧಾರಾವಾಹಿ ನಿರ್ದೇಶಕ ಅರವಿಂದ್ ಕೌಶಿಕ್ ಅವರನ್ನು ಬಂಧಿಸಲಾಗಿದೆ. ವಂಚನೆ ಆರೋಪದ ಅಡಿಯಲ್ಲಿ ಬೆಂಗಳೂರಿನ ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಧಾರಾವಾಹಿ ನಿರ್ಮಾಪಕನಿಂದ ಹಣ ಪಡೆದು ವಂಚನೆ ಮಾಡಿದ ಆರೋಪ ಅರವಿಂದ್ ಕೌಶಿಕ್ ಅವರ ಮೇಲಿದೆ. ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲೂ ನಿರ್ದೇಶನ ಮಾಡಿದ್ದ ಅರವಿಂದ ಕೌಶಿಕ್ ಈಗ ಈ ಪ್ರಕರಣದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ‘ನಮ್ ಏರಿಯಾಲ್ ಒಂದಿನ’ಹುಲಿರಾಯ ”ಶಾರ್ದೂಲ, ‘ತುಘಲಕ್’ ಮುಂತಾದ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದಾರೆ.
‘ಕಮಲಿ’ ಧಾರಾವಾಹಿಗೆ ಆ್ಯಕ್ಷನ್-ಕಟ್ ಹೇಳಿದ್ದ ಅವರು, ರೋಹಿತ್ ಅವರಿಂದ ಧಾರಾವಾಹಿ ನಿರ್ಮಿಸಲು 73 ಲಕ್ಷ ರೂಪಾಯಿ ಹಣ ಪಡೆದಿದ್ದರು. ಆದರೆ ಆ ಹಣ ವಾಪಸ್ ನೀಡಿದೇ ವಂಚನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅರವಿಂದ್ ಕೌಶಿಕ್ ಈಗ ಪೊಲೀಸರ ಅತಿಥಿ ಆಗಿದ್ದಾರೆ.
2018ರಲ್ಲಿ ಧಾರಾವಾಹಿ ನಿರ್ಮಾಣಕ್ಕೆ ರೋಹಿತ್ ಅವರು ಹಣ ಹೂಡಿದ್ದರು. ಈವರೆಗೂ ಹಣ ಹಿಂದಿರುಗಿಸದೆ, ಲಾಭಾಂಶ ಕೂಡ ನೀಡದೇ ಅರವಿಂದ್ ಕೌಶಿಕ್ ವಂಚಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವೈಯಾಲಿಕಾವಲ್ ಠಾಣೆಗೆ ನಿರ್ಮಾಪಕ ರೋಹಿತ್ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 506, 420ರಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.