ರಾಜಸ್ಥಾನ: ರಾಜಸ್ಥಾನದ ಉದಯಪುರದಲ್ಲಿ ದ್ವೇಷದ ಹತ್ಯೆ ನಡೆದಿದೆ. ಉದಯಪುರದ ಮಾಲ್ದಾಸ್ ಸ್ಟ್ರೀಟ್ ನಲ್ಲಿ ಹಾಡಹಗಲೇ ಕನ್ನಯ್ಯಲಾಲ್(40) ಎಂಬಾತನನ್ನು ಕತ್ತು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಬಿಜೆಪಿಯ ಮಾಜಿ ವಕ್ತಾರೆ ನೂಪುರ ಶರ್ಮಾ ಹೇಳಿಕೆ ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಪ್ರತೀಕಾರವಾಗಿ ಈ ಹತ್ಯೆ ನಡೆದಿದೆ. ಹತ್ಯೆ ಬಳಿಕ ಹಂತಕರು ಪ್ರಧಾನಿ ಮೋದಿಗೂ ವಿಡಿಯೋದಲ್ಲಿ ಬೆದರಿಕೆ ಹಾಕಿದ್ದಾರೆ. ಇನ್ನು ಶೀಘ್ರವೇ ಹತ್ಯೆಕೋರರನ್ನು ಬಂಧಿಸಿ ಕ್ರಮ ಕೈಗೊಳ್ಳುವುದಾಗಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಭರವಸೆ ನೀಡಿದ್ದು ಮುನ್ನೆಚ್ಚರಿಕೆಯಿಂದ ಹತ್ಯೆಯಾದ ಸ್ಥಳದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ರಾಜಸ್ಥಾನದ ಉದಯಪುರ ನಗರದ ಮಾಲ್ದಾಸ್ ಸ್ಟ್ರೀಟ್ ನಲ್ಲಿ ಇಂದು ಹಾಡಹಗಲೇ ಭೀಕರ ಹತ್ಯೆ ನಡೆದಿದೆ. ಕನ್ನಯ್ಯಲಾಲ್ ಎಂಬ ಟೈಲರ್ ಅಂಗಡಿ ನಡೆಸುತ್ತಿದ್ದವರನ್ನು ಗೌಸ್ ಮೊಹಮ್ಮದ್ ಮತ್ತು ಮೊಹಮ್ಮದ್ ರಿಯಾಜ್ ಅನ್ಸಾರಿ ಎಂಬ ದುಷ್ಕರ್ಮಿಗಳು ಹಾಡಹಗಲೇ ಕತ್ತು ಕತ್ತರಿಸಿ ಹತ್ಯೆ ಮಾಡಿದ್ದಾರೆ. ಬಿಜೆಪಿಯ ಮಾಜಿ ವಕ್ತಾರೆ ನೂಪುರ ಶರ್ಮಾ ಹೇಳಿಕೆಯನ್ನ ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಪ್ರತೀಕಾರವಾಗಿ ಈ ಹತ್ಯೆ ನಡೆದಿದೆ. ಕನ್ನಯ್ಯಲಾಲ್ ಅವರ ಎಂಟು ವರ್ಷದ ಮಗ ತಂದೆಯ ಮೊಬೈಲ್ ನಿಂದ ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ. ಇದಾದ ಬಳಿಕ ಧನ್ಮಂಡಿ ಪೋಲೀಸರು ಕನ್ನಯ್ಯಲಾಲ್ ರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಆದರೇ, ಕನ್ನಯ್ಯಲಾಲ್ ಗೆ ಜೀವ ಬೆದರಿಕೆ ಕರೆಗಳು ಬರುತ್ತಲೇ ಇದ್ದವು. ಇದರಿಂದ ಜೀವ ಭಯಕ್ಕೊಳಗಾದ ಕನ್ನಯ್ಯಲಾಲ್, ಪೊಲೀಸ್ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು. ಆದರೇ, ಪೊಲೀಸರು ಕನ್ನಯ್ಯಲಾಲ್ ಮನವಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕನ್ನಯ್ಯಲಾಲ್ ಗೆ ಪೊಲೀಸ್ ರಕ್ಷಣೆ ನೀಡಿರಲಿಲ್ಲ. ಇಂದು ಪೊಲೀಸ್ ಠಾಣೆಯಿಂದ ಬಂದ ಕನ್ನಯ್ಯಲಾಲ್ ರನ್ನ ಹತ್ಯೆ ಮಾಡಿದ್ದಾರೆ. ರಸ್ತೆಯಲ್ಲಿ ಕನ್ನಯ್ಯಲಾಲ್ ಶವ ಬಿದ್ದಿತ್ತು. ಹತ್ಯೆ ಘಟನೆ ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಎಂ.ಬಿ. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಹತ್ಯೆಯ ಸ್ಥಳದಲ್ಲಿ ರಕ್ತದ ಕೋಡಿಯೇ ಹರಿದಿದೆ.
ಹತ್ಯೆ ಬಳಿಕ ದುಷ್ಕರ್ಮಿಗಳು ಮಾರಾಕಾಸ್ತ್ರಗಳನ್ನ ಹಿಡಿದುಕೊಂಡೇ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಪ್ರಧಾನಿ ಮೋದಿಗೂ ಜೀವ ಬೆದರಿಕೆ ಹಾಕಿದ್ದಾರೆ. ನೀವು ಬೆಂಕಿ ಹಚ್ಚಿದ್ದೀರಿ, ಅದನ್ನು ನಾವು ಆರಿಸುತ್ತೇವೆ. ಈ ಮಾರಾಕಾಸ್ತ್ರ ಮೋದಿಯ ಕುತ್ತಿಗೆವರೆಗೂ ತಲುಪುತ್ತೆ ಎಂದು ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾರೆ.
ಈ ಹತ್ಯೆಯ ಘಟನೆ ಹಾಗೂ ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ ವಿಡಿಯೋ ಬಳಿಕ ರಾಜಸ್ಥಾನದ ಅನೇಕ ಕಡೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಉದಯಪುರದ ಮಾಲ್ದಾಸ್ ಸ್ಟ್ರೀಟ್ ನಲ್ಲಿ ಅಂಗಡಿಗಳನ್ನು ವ್ಯಾಪಾರಿಗಳು ಬಂದ್ ಮಾಡಿದ್ದಾರೆ. ಸಿಎಂ ಅಶೋಕ್ ಗೆಹ್ಲೋಟ್ ಶಾಂತಿ ಕಾಪಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ. ಹತ್ಯೆ ಘಟನೆಯು ನೋವು ತರುವಂಥದ್ದು ಮತ್ತು ನಾಚಿಕೆಪಡುವಂಥದ್ದು ಎಂದು ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕ ಗುಲಾಲ್ ಚಂದ್ ಕಟಾರಿಯಾ, ರಾಜ್ಯ ಸರ್ಕಾರ, ಪೊಲೀಸರು ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಇನ್ನು ಮತ್ತೊಂದು ಕಡೆ ರಾಜಸ್ಥಾನದ ಉದಯಪುರದಲ್ಲಿ 24 ಗಂಟೆ ಕಾಲ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಇಂಟರ್ನೆಟ್ ಬಂದ್ ಮಾಡುವುದಾಗಿ ವಿಭಾಗೀಯ ಆಯುಕ್ತ ರಾಜೇಂದ್ರ ಭಟ್ ಮಾಹಿತಿ ನೀಡಿದ್ದಾರೆ. ಹಾಗೂ ಉದಯಪುರ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.