ನೆಲ್ಯಾಡಿ: ರಸ್ತೆ ಬದಿ ಮಲಗಿದ್ದ ವೃದ್ಧರೋರ್ವರ ಮೇಲೆ ಲಾರಿ ಹರಿದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಗುಂಡ್ಯದಲ್ಲಿ ನಡೆದಿದೆ.
ಮೂಲತ: ಕೇರಳ ನಿವಾಸಿ ಪೊನ್ನಪ್ಪನ್ ಮೃತಪಟ್ಟ ದುರ್ದೈವಿ. ಘಟನಾ ಸ್ಥಳದಿಂದ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಇವರು ಕಳೆದ ಹಲವು ವರ್ಷಗಳಿಂದ ಗುಂಡ್ಯ ಪರಿಸರದ ಅಂಗಡಿಗಳಲ್ಲಿ ಕ್ಲೀನಿಂಗ್ ಸೇರಿದಂತೆ ಸಣ್ಣ ಪುಟ್ಟ ಕೆಲಸ ನಿರ್ವಹಿಸಿಕೊಂಡು ಅಂಗಡಿ ಮುಂದೆ, ರಸ್ತೆ ಫುಟ್ಪಾತ್ಗಳಲ್ಲಿ ಮಲಗುತ್ತಿದ್ದ ಪೊನ್ನಪ್ಪನ್ ಮೇಲೆ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿಯೊಂದು ಹಾದುಹೋಗಿ ಪರಾರಿಯಾಗಿದೆ.
ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಪೊನ್ನಪ್ಪನ್ರನ್ನು ಸ್ಥಳೀಯರು ಆಸ್ಪತ್ರೆಗೆ ಕರೆತಂದರಾದರೂ ಆ ವೇಳೆಗೆ ಆತ ಮೃತಪಟ್ಟಿದ್ದ. ಕೂಡಲೇ ಸ್ಥಳೀಯರು ಈ ಬಗ್ಗೆ ನೆಲ್ಯಾಡಿ ಹೊರಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಲಾರಿಯನ್ನು ಉಪ್ಪಿನಂಗಡಿಯಲ್ಲಿ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.