ನೆಲ್ಯಾಡಿ: ಸ್ಕೂಟರ್ ಖರೀದಿಸಿದ ನಂತರ ಆ ವಾಹನದಲ್ಲಿ ಎಲ್ಲಿಗೂ ಹೋಗದೇ ಇದ್ದರು, ಮಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ದಂಡ ಪಾವತಿಸುವಂತೆ ಬಜತ್ತೂರು ನಿವಾಸಿಯೋರ್ವರಿಗೆ ಮಂಗಳೂರು ಸಿಟಿ ಸಂಚಾರ ಪೊಲೀಸ್ ಠಾಣೆಯಿಂದ ಬರೋಬ್ಬರಿ ಆರು ನೋಟಿಸ್ ಬಂದಿದ್ದು, ಸ್ಕೂಟರ್ ಮಾಲಕನನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.
ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಪಂರ್ದಾಜೆ ದರ್ಖಾಸು ನಿವಾಸಿ ಅಣ್ಣಿ ಗೌಡ ಎಂಬವರು 6 ತಿಂಗಳ ಹಿಂದೆ ಕೆಎ 21 ಎಕ್ಸ್ 8648 ನಂಬರ್ನ 2018 ರ ಮೋಡೆಲ್ನ ಹೋಂಡಾ ಆಕ್ಟೀವಾ ಸ್ಕೂಟರ್ ಅನ್ನು ಕಬಕ ನಿವಾಸಿಯೋರ್ವರಿಂದ ಖರೀದಿಸಿದ್ದರು. ಬಳಿಕ 1 ತಿಂಗಳೊಳಗೆ ಅವರು ಆ ವಾಹನವನ್ನು ತನ್ನ ಹೆಸರಿಗೆ ನೋಂದಾಯಿಸಿಕೊಂಡಿದ್ದರು. ಕೂಲಿ ಕೆಲಸ ಮಾಡುತ್ತಿರುವ ಅಣ್ಣಿ ಗೌಡರಿಗೆ ಬೈಕ್ ಚಾಲನೆ ಗೊತ್ತಿಲ್ಲದೇ ಇ ತನಕ ವಾಹನದಲ್ಲಿ ಎಲ್ಲಿಗೂ ಹೋಗಿಲ್ಲ. ಆದರೂ ಇದೀಗ ಡಿ.22ರಂದು ಅವರ ಮನೆಗೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಮಂಗಳೂರು ಸಿಟಿ ಸಂಚಾರ ಪೊಲೀಸ್ ಠಾಣೆಯಿಂದ ಬರೋಬ್ಬರಿ 6 ನೋಟಿಸ್ ಬಂದಿದ್ದು ತಲಾ 500 ರೂಪಾಯಿಯಂತೆ ದಂಡ ವಿಧಿಸಲಾಗಿದೆ.
ನ.15, ನ.16, ನ.17, ನ.23, ನ.29, ಡಿ.30 ರಂದು ಮಂಗಳಾದೇವಿ ಪ್ರದೇಶದಲ್ಲಿ ಹೆಲ್ಮೆಟ್ ಇಲ್ಲದೇ ವಾಹನ ಸಂಚಾರ ಮಾಡಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಇದರಿಂದ ಬೆಚ್ಚಿ ಬಿದ್ದಿರುವ ಅಣ್ಣಿ ಗೌಡರವರು ನೋಟಿಸ್ ಹಿಡಿದುಕೊಂಡು ಉಪ್ಪಿನಂಗಡಿಯ ನ್ಯಾಯವಾದಿ ರವಿಕಿರಣ್ ಅವರ ಬಳಿಗೆ ಬಂದಿದ್ದು ಅವರು ಸಂಚಾರ ಠಾಣೆ ಪೊಲೀಸರನ್ನು ಸಂಪರ್ಕಿಸಿದಾಗ ಅಸಲಿ ಕಥೆ ಗೊತ್ತಾಗಿದೆ.
ಅಣ್ಣಿ ಗೌಡರವರ ಹೆಸರಿನಲ್ಲಿರುವ ಕೆಎ 21 ಎಕ್ಸ್ 8648 ನಂಬರ್ನ ಹೋಂಡಾ ಆಕ್ಟೀವಾದ ನೋಂದಾವಣೆ ನಂಬರನ್ನು ಯಾರೋ ಅಪರಿಚಿತರು ಅವರ ಸ್ಕೂಟರ್ಗೆ ಅಳವಡಿಸಿಕೊಂಡು ಮಂಗಳೂರಿನಲ್ಲಿ ಓಡಾಟ ನಡೆಸುತ್ತಿದ್ದಾರೆ. ಆ ವ್ಯಕ್ತಿ ಸಂಚಾರ ನಿಯಮ ಉಲ್ಲಂಸುತ್ತಿದ್ದತೆ ಅಸಲಿ ಮಾಲಕ ಬಜತ್ತೂರಿನ ಅಣ್ಣಿ ಗೌಡರವರಿಗೆ ನೋಟಿಸ್ ಬಂದಿದೆ. ನನ್ನ ದ್ವಿ ಚಕ್ರ ವಾಹನದ ನೋಂದಾವಣೆ ನಂಬರ್ ಅನ್ನು ಯಾರೋ ಅಪರಿಚಿತರು ನಕಲಿ ಮಾಡಿ ಅವರ ಸ್ಕೂಟರ್ಗೆ ಅಳವಡಿಸಿಕೊಂಡು ಓಡಾಟ ನಡೆಸುತ್ತಿರುವ ಬಗ್ಗೆ ಅಣ್ಣಿ ಗೌಡರವರು ಮಂಗಳೂರು ಸಿಟಿ ಸಂಚಾರ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಸಾರ್ವಜನಿಕರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ.
ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ ಭಾಗದ ದ್ವಿ ಚಕ್ರ ವಾಹನಗಳ ನಂಬರ್ಗಳನ್ನು ಮಂಗಳೂರು ಭಾಗದಲ್ಲಿ ಕೆಲವರು ತಮ್ಮ ಸ್ಕೂಟರ್ ಅಳವಡಿಸಿಕೊಂಡು ಓಡಾಟ ನಡೆಸುತ್ತಿರುವ ೮ ಪ್ರಕರಣಗಳು ಈ ತನಕ ಬೆಳಕಿಗೆ ಬಂದಿದೆ. ಕಾಟಿಪಳ್ಳ , ಮಂಗಳಾದೇವಿ ವ್ಯಾಪ್ತಿಯಲ್ಲಿ ಈ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ನಕಲಿ ನಂಬರ್ ಪ್ಲೇಟ್ ಹಾಕಿ ಓಡಾಟ ನಡೆಸುತ್ತಿದ್ದ ಎರಡು ದ್ವಿ ಚಕ್ರ ವಾಹನಗಳನ್ನು ಈಗಾಗಲೇ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಳ್ಳಲಾಗಿದೆ. ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ನೋಟಿಸ್ ಬಂದಿರುವ ದ್ವಿ ಚಕ್ರ ವಾಹನಗಳ ಮಾಲಕರು, ದೂರವಾಣಿ ಕರೆ ಮಾಡಿ ಠಾಣೆಗೆ ಮಾಹಿತಿ ನೀಡುತ್ತಿದ್ದಾರೆ. ಕೆಲವರು ಠಾಣೆಗೆ ಬಂದು ಬರೆದುಕೊಟ್ಟು ಹೋಗಿದ್ದಾರೆ. ಈ ರೀತಿಯ ನೋಟಿಸ್ ಬಂದಲ್ಲಿ ಠಾಣೆಗೆ ಮಾಹಿತಿ ನೀಡುವಂತೆಮಂಗಳೂರು ಸಿಟಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.