ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ತಾಲೂಕಿನ ಬೊಗಳೇರಹಟ್ಟಿಯ ಖಾಸಗಿ ವಾಹನ ಚಾಲಕ ಚಂದ್ರಶೇಖರ್ ಮೂರು ವರ್ಷಗಳ ಹಿಂದಷ್ಟೇ ಗೂಳಯ್ಯನಹಟ್ಟಿಯ ಗೌತಮಿ ಎಂಬುವವರ ಜೊತೆ ಮದುವೆ ಆಗಿದ್ದನು. ಸುಂದರ ಸಂಸಾರಕ್ಕೆ ಮುದ್ದಾದ ಮಗುವು ಜೊತೆ ಆಗಿತ್ತು. ಆದರೆ ಇತ್ತೀಚೆಗೆ ಚಂದ್ರಶೇಖರ್ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದನು ಎನ್ನಲಾಗಿದೆ. ಗೌತಮಿ ತಂದೆ ಚೀಟಿ ಹಾಕಿದ್ದೇನೆ. ದುಡ್ಡು ಬಂದ ಬಳಿಕ ಕೊಡುವುದಾಗಿ ಹೇಳಿದ್ರೂ ತಾಳ್ಮೆ ಇಲ್ಲದೆ ಕಿರುಕುಳ ನೀಡುತ್ತಿದ್ದನು. ಆಸ್ತಿ ಮಾರಾಟ ಮಾಡಿ ಹಣ ನೀಡುವಂತೆ ಮಾವನನ್ನೂ ಪೀಡಿಸುತ್ತಿದ್ದ ಇತನಿಗೆ ಸಂಬಂಧಿಕರು ಅನೇಕ ಸಲ ಬುದ್ಧಿವಾದ ಹೇಳಿದ್ದರು. ಆದರೆ ಇದು ಯಾವುದಕ್ಕೂ ಕೇಳದ ಚಂದ್ರಶೇಖರ್ ಮಾರಕಾಸ್ತ್ರದಿಂದ ಹೊಡೆದು ಗೌತಮಿಯ ಹತ್ಯೆ ಮಾಡಿದ್ದಾನೆ.
ಇನ್ನು ಚಂದ್ರಶೇಖರ್ ಪತ್ನಿಯನ್ನ ಕೊಲೆ ಮಾಡಿ ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಬಿಂಬಿಸಲು ಪ್ರಯತ್ನಿಸಿದ್ದಾನೆ. ತುರುವನೂರು ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದಾನೆ ಎಂಬುದು ಮೃತಳ ಕುಟುಂಬಸ್ಥರ ಆರೋಪ. ಆದರೆ ತುರುವನೂರು ಠಾಣೆಯ ಪಿಎಸ್ಐ ವೆಂಕಟೇಶ್ ಮತ್ತು ಸಿಬ್ಬಂದಿ ಮಾತ್ರ ರಾತ್ರಿ 10ಗಂಟೆಯಾದರೂ ಕ್ಯಾರೆ ಅಂದಿಲ್ಲ. ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯ ಶವಾಗಾರದಲ್ಲಿ ಗೌತಮಿ ಶವವಿಟ್ಟು ಅರ್ಧ ದಿನವೇ ಕಳೆದರೂ ದೂರು ದಾಖಲಿಸಿಕೊಂಡಿಲ್ಲ. ಹೀಗಾಗಿ ರೊಚ್ಚಿಗೆದ್ದ ಮೃತಳ ಸಂಬಂಧಿಕರು ಚಿತ್ರದುರ್ಗ ಎಸ್ಪಿ ಕಚೇರಿಗೆ ಆಗಮಿಸಿ ಧರಣಿ ನಡೆಸಿದರು. ತುರುವನೂರು ಪಿಎಸ್ಐ ವೆಂಕಟೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಡಿವೈಎಸ್ಪಿ ಅನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಮೃತಳ ಸಂಬಂಧಿಕರು ಧರಣಿ ವಾಪಸ್ ಪಡೆದರು.