ಪಡುಬಿದ್ರಿ: ಎಟಿಎಂ ಕೇಂದ್ರದಲ್ಲಿ ವ್ಯಕ್ತಿಯೊಬ್ಬರಿಗೆ ಎಟಿಎಂನಿಂದ ಹಣ ಡ್ರಾ ಮಾಡಲು ತಿಳಿಯದೆ ಅಲ್ಲಿದ್ದ ಅಪರಿಚಿತ ವ್ಯಕ್ತಿಗೆ ಹೇಳಿದಾಗ ಆತ ಹಣ ಡ್ರಾ ಮಾಡಿ ವಂಚನೆ ನಡೆಸಿರುವ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.
ವಂಚನೆಗೊಳಗಾದ ವ್ಯಕ್ತಿ ಪಡುಬಿದ್ರಿಯ ಅಬ್ಬೇಡಿ ನಿವಾಸಿ ವಿಜಯ. ಜುಲೈ 13ರಂದು ಅವರು ಎಸ್ಬಿಐ ಬ್ಯಾಂಕಿನ ಕೆಳಗಡೆ ಇರುವ ಎಟಿಎಂ ಕೇಂದ್ರಕ್ಕೆ ತೆರಳಿದ್ದು ಆದರೆ, ಅಲ್ಲಿ ಸಕ್ಯೂರಿಟಿ ಗಾರ್ಡ್ ಇರಲಿಲ್ಲ. ಎಟಿಎಂನಿಂದ ಹಣ ಡ್ರಾ ಮಾಡಲು ತಿಳಿಯದ ವ್ಯಕ್ತಿ ಎಟಿಎಂ ಕೇಂದ್ರದ ಒಳಗೆ ಸುಮಾರು 40-45 ವಯಸ್ಸಿನ ವ್ಯಕ್ತಿಯ ಬಳಿ ಹೋಗಿ ತನಗೆ ಹಣ ತೆಗೆಯಲು ಗೊತ್ತಿಲ್ಲ ಸಹಾಯ ಮಾಡಿ ಎಂದು ಕೇಳಿದ್ದರು. ಆ ಅಪರಿಚಿತ ವ್ಯಕ್ತಿ ಇವರಿಂದ ಎಟಿಎಂ ಕಾರ್ಡ್ ಪಡೆದು, ಕಾರ್ಡ್ನ್ನು ಎಟಿಎಂ ಮೆಶೀನ್ಗೆ ಹಾಕಿ ಪಿನ್ ನಂಬರ್ ಹಾಕಲು ಹೇಳಿ, ಬ್ಯಾಲೆನ್ಸ್ ಚೆಕ್ ಮಾಡಿದ್ದರು. ಬಳಿಕ ಈ ಎಟಿಎಂನಲ್ಲಿ ಹಣ ಇಲ್ಲ ಎಂದು ಹೇಳಿ ವಿಜಯ್ ಅವರಿಗೆ ಕಾರ್ಡನ್ನು ನೀಡಿ ಆ ಅಪರಿಚಿತ ವ್ಯಕ್ತಿ ಅಲ್ಲಿಂದ ತೆರಳಿದ್ದರು.
ವಿಜಯ್ ಅವರು ಆ ಕಾರ್ಡನ್ನು ಗಮನಿಸದೇ ತಮ್ಮ ಜೇಬಿಗೆ ಹಾಕಿಕೊಂಡಿದ್ದು, ಸ್ವಲ್ಪ ಸಮಯದ ನಂತರ ಎಸ್ಬಿಐ ಎಟಿಎಂ ಬಳಿಗೆ ಬಂದು ಸೆಕ್ಯೂರಿಟಿ ಗಾರ್ಡ್ ಬಳಿ 10 ಸಾವಿರ ರೂ. ಹಣ ಡ್ರಾ ಮಾಡಿಕೊಡುವಂತೆ ಎಟಿಎಂ ಕಾರ್ಡನ್ನು ನೀಡಿದರು. ಈ ವೇಳೆ ಅಪರಿಚಿತ ವ್ಯಕ್ತಿ ಬೇರೆ ಕಾರ್ಡ್ ನೀಡಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಹಣ ಡ್ರಾ ಮಾಡಲು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಗೆ ಹೋದಾಗ ಅವರ ಅಕೌಂಟ್ನಿಂದ ದುರ್ಗಾ ಜ್ಯುವೆಲ್ಲರಿಯಲ್ಲಿ 25 ಸಾವಿರ ರೂ. ಮೌಲ್ಯದ ಚಿನ್ನದ ನಾಣ್ಯವನ್ನು ಖರೀದಿಸಿದ್ದು, ಬಳಿಕ ಎಟಿಎಂನಲ್ಲಿ 10 ಸಾವಿರ ರೂ. ನಂತ ಎರಡು ಬಾರಿ ಹಣವನ್ನು ಡ್ರಾ ಮಾಡಿರುವುದು ತಿಳಿದುಬಂದಿದೆ. ಈ ಘಟನೆಯ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.