ಮಂಗಳೂರು: ಪಿಎಫ್ಐ ನಾಯಕರ ಕಛೇರಿ ಮೇಲೆ ಎನ್ಐಎ ದಾಳಿ ನಡೆಸಿದ್ದು ಇದರ ವಿರುದ್ಧ ರಾಜ್ಯದ ಯಾವುದಾದರೂ ಧಾರ್ಮಿಕ ಗುರುಗಳು, ಉಲೇಮಾಗಳು ಅಪಸ್ವರ ಎತ್ತಿದ್ದಾರಾ..? ಯಾರೂ ಪಿಎಫ್ಐ ಮೇಲಿನ ದಾಳಿಯ ವಿರುದ್ಧ ಅಪಸ್ವರ ಎತ್ತಿಲ್ಲ. ಮುಸ್ಲಿಂ ಧರ್ಮದ ಸಹಿತ ಎಲ್ಲಾ ಧರ್ಮಗಳು ನ್ಯಾಯಯುತ ತನಿಖೆಗೆ ಖಂಡಿತಾ ಬೆಂಬಲ ಕೊಡುತ್ತಾರೆ. ಆದರೆ ಕಾನೂನು ಕೈಗೆತ್ತಿಕೊಳ್ಳುವವರನ್ನು ಸರ್ಕಾರ ಹದ್ದುಬಸ್ತಿನಲ್ಲಿಡಬೇಕಾದ ಕರ್ತವ್ಯ ಎಂದು ವಿಧಾನಸಭೆಯ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಹೇಳಿದರು.
ಪಿಎಫ್ಐ ಮೇಲಿನ ದಾಳಿ ಇಡೀ ಮುಸ್ಲಿಂ ಸಮುದಾಯದ ಮೇಲಿನ ದಾಳಿಯಾಗಿದೆ ಎಂಬಂತಹ ಮಾತುಗಳು ಕೇಳಿಬರುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಮುಸ್ಲಿಂ ಸಮುದಾಯದ ಮೇಲಿನ ದಾಳಿಯಲ್ಲ, ಅದೇ ರೀತಿ ಯಾವ ಸಂಘಟನೆಗಳನ್ನು ಬ್ಯಾನ್ ಮಾಡಬೇಕು, ಇನ್ನೇನು ಮಾಡಬೇಕೆಂಬುದು ತನಿಖೆಯ ಆಧಾರದಲ್ಲಿ ತಿಳಿಯುತ್ತದೆ. ಸಮಾಜದಲ್ಲಿ ಅಶಾಂತಿ ಹುಟ್ಟುವ, ದ್ವೇಷಾಧಾರಿತ ಕೃತ್ಯ ಮಾಡುತ್ತಿದ್ದರೆ ಎಲ್ಲ ಸಂಘಟನೆಗಳಿಗೂ ಸಮಾನವಾದ ಕಾನೂನು ತನ್ನಿ. ಇದರಿಂದ ದೇಶದಲ್ಲಿ ನ್ಯಾಯ, ತಾರತಮ್ಯ ರಹಿತವಾದ ಸಮಾಜ ಅಥವಾ ಆಡಳಿತಕ್ಕೆ ಎಲ್ಲರೂ ಬೆಂಬಲ ಕೊಡುತ್ತಾರೆ ಎಂದು ಸರಕಾರಕ್ಕೆ ಕಿವಿಮಾತು ಹೇಳಿದರು.
ಸಮಾನತೆಯ ಕಾನೂನು ತನ್ನಿ .ಯಾವುದೇ ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು. ಶಾಂತಿ ಸೌಹಾರ್ದದ ವಾತಾವರಣ ಸರ್ಕಾರ ನಿರ್ಮಾಣ ಮಾಡಬೇಕು. ಸರಕಾರದ ಕಾರ್ಯ ರಚನೆಯು ಒಂದೇ ರೀತಿಯಾಗಿದ್ದಲ್ಲಿ ಎಲ್ಲರೂ ಬೆಂಬಲ ಕೊಡುತ್ತಾರೆ. ಯಾರಿಗೂ ಅನ್ಯಾಯವಾಗಬಾರದು. ನೈಜ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಲಿ, ಆದರೆ ನಿರಪರಾಧಿಗಳಿಗೆ ತೊಂದರೆಯಾಗಬಾರದು. ಯಾವ ಸಂಸ್ಥೆ ಬ್ಯಾನ್ ಮಾಡಬೇಕು ಅನ್ನುವುದು ತನಿಖೆಯಲ್ಲಿ ಗೊತ್ತಾಗುತ್ತೆ. ಆದರೆ ಎಲ್ಲಾ ಸಂಘಟನೆಗೆ ಸಮಾನತೆಯ ಕಾನೂನು ತನ್ನಿ. ದ್ವೇಷಾಧರಿತ ಮತ್ತು ಗಲಭೆ ಸೃಷ್ಟಿಸುವ ಕೆಲಸ ಆಗಿದ್ದರೆ ಎಲ್ಲಾ ಸಂಘಟನೆಗಳಿಗೂ ಒಂದೇ ಕಾನೂನು ತನ್ನಿ ಎಂದು ಯುಟಿ ಖಾದರ್ ಒತ್ತಾಯಿಸಿದ್ದಾರೆ.