ಚಿಕ್ಕಬಳ್ಳಾಪುರ : ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ಸಾಕು ತಾಯಿ ನಿಧನರಾಗಿದ್ದಾರೆ. ಅವರ ಸಾಕು ತಾಯಿ ರತ್ನಮ್ಮ (72) ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.
ವಯೋ ಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ರತ್ನಮ್ಮ ಅವರು ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಮ್ಮನ ಅಗಲಿಕೆ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರದೀಪ್ ಈಶ್ವರ್ ಆಘಾತಕ್ಕೆ ಒಳಗಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿದ್ದ ಪ್ರದೀಪ್ ಈಶ್ವರ್, ವಿಷಯ ತಿಳಿಯುತ್ತಿದ್ದಂತೆಯೇ ಪೇರೇಸಂದ್ರ ಗ್ರಾಮಕ್ಕೆ ತೆರಳಿದ್ದಾರೆ.
ಪ್ರದೀಪ್ ಈಶ್ವರ್, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ. ಮೇ 10 ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಆರೋಗ್ಯ ಸಚಿವ ಡಾ.ಸುಧಾಕರ್ ಅವರನ್ನು ಸೋಲಿಸಿ ಶಾಸಕರಾಗಿ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮತ್ತು ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ಶುಭ ಕಾರ್ಯ ನಿಮಿತ್ತ ಪ್ರದೀಪ್ ಈಶ್ವರ್ ಬೆಂಗಳೂರಿಗೆ ಬಂದಿದ್ದರು.
2016ರಲ್ಲಿ ಸಮಾಜ ಸೇವೆ, ಪ್ರತಿಭಟನೆ ಎಂದು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡ ಅವರು, ಅತ್ಯಲ್ಪ ಅವಧಿಯಲ್ಲೇ ಜನಪ್ರಿಯರಾದರು. ಈ ಬಾರಿಯ ಚುನಾವಣೆಯಲ್ಲಿ ಸಚಿವ ಸುಧಾಕರ್ ಅವರೊಂದಿಗೆ ಸಣೆಸಿ ವಿಧಾನಸಭೆಯನ್ನು ಪ್ರವೇಶಿಸಿದರು. ಪ್ರದೀಪ್ ಈಶ್ವರ್ ಅವರ ಬದುಕಿನ ಯಶಸ್ಸಿನಲ್ಲಿ ರತ್ನಮ್ಮನವರ ಪಾತ್ರವೂ ಬಹಳ ದೊಡ್ಡದು. ಅವರ ಗೆಲುವಿನ ಸಂತಸದಲ್ಲಿರಬೇಕಾದರೆ ತಮ್ಮ ಸಾಕುತಾಯಿಯ ನಿಧನದ ಸುದ್ದಿ ಬಂದಿದೆ.