ಪಿಯುಸಿ ಓದುತ್ತಿದ್ದ ಅಪ್ರಾಪ್ತೆಯನ್ನು ಮದುವೆಯಾಗಿದ್ದ ಯುವಕ ಸೇರಿದಂತೆ 11 ಜನರ ವಿರುದ್ಧ ಶಿವಮೊಗ್ಗ ತುಂಗಾನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಬಾಲಕಿಯನ್ನು ರಕ್ಷಿಸಿ ಬಾಲಮಂದಿರಕ್ಕೆ ದಾಖಲಿಸಲಾಗಿದೆ.
ಬಾಲಕಿಯನ್ನು ಪ್ರೀತಿಸಿ ಬಾಲ್ಯ ವಿವಾಹವಾಗಿದ್ದ ಯುವಕ, ಮದುವೆ ಮಾಡಿಸಿದ ಅರ್ಚಕ, ಅಡುಗೆ ತಯಾರಕ, ಲಗ್ನಪತ್ರಿಕೆ ಮುದ್ರಕ, ಛಾಯಾಗ್ರಾಹಕರು ಹಾಗೂ ಮದುವೆ ಸಮಾರಂಭದಲ್ಲಿ ಭಾಗಿಯಾದ ಸ್ನೇಹಿತರು ಸಂಬಂಧಿಕರ ವಿರುದ್ಧವೂ ಕೇಸ್ ದಾಖಲಾಗಿದೆ.
ಎರಡು ವರ್ಷಗಳ ಹಿಂದೆ ಗೃಹಪ್ರವೇಶ ಸಮಾರಂಭದಲ್ಲಿ ದೂರದ ಸಂಬಂಧಿಯಾಗಿದ್ದ ಬಾಲಕಿಯನ್ನು ಪರಿಚಯ ಮಾಡಿಕೊಂಡ ಯುವಕ ಸಂತೋಷ್ ಆಕೆಯನ್ನು ಪ್ರೀತಿಸಿದ್ದ. ಈ ವಿಷಯ ತಿಳಿದ ಮನೆಯವರು ಮದುವೆಗೆ ಒಪ್ಪಿದ್ದು ಜುಲೈ 31 ರಂದು ದೇವಾಲಯವೊಂದರಲ್ಲಿ ಮದುವೆಯಾಗಿತ್ತು. ಬೀಗರೂಟದ ವೇಳೆಗೆ ಮಕ್ಕಳ ಕಲ್ಯಾಣ ಸಮಿತಿಗೆ ವಿಷಯ ಗೊತ್ತಾಗಿ ಕ್ರಮ ಕೈಗೊಂಡಿದ್ದಾರೆ. ಯುವಕ ಹಾಗೂ ಬಾಲಕಿಯ ಪೋಷಕರ ವಿರುದ್ಧ ಕೂಡ ಪ್ರಕರಣ ದಾಖಲಿಸಲಾಗಿದೆ.
ಜುಲೈ 31 ರಂದು ಶಿವಮೊಗ್ಗದ ಸಂತೆಕಡೂರಿನ ಬಾಲಸುಬ್ರಮಣ್ಯ ದೇವಾಲಯದಲ್ಲಿ ಮದುವೆ ನಡೆದಿತ್ತ . ಮದುವೆಯಾದ ಮರುದಿನ ಬೀಗರ ಊಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಮಕ್ಕಳ ರಕ್ಷಣಾ ಘಟಕದ ಸದಸ್ಯರು ದಾಳಿ ನಡೆಸಿದ್ದು, ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಬಾಲಕಿಯ ವಿಚಾರಣೆ ನಡೆಸಿದಾಗ ಮದುವೆ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಬಾಲಕಿಯು ತನ್ನ ದೂರದ ಸಂಬಂಧಿ ಸಂತೋಷ್ ಎಂಬುವವನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಪೋನ್ ನಲ್ಲಿ ಮಾತನಾಡುವ ವಿಚಾರ ಬಾಲಕಿಯ ತಂದೆ ತಾಯಿಗೆ ತಿಳಿದು ಗಲಾಟೆಯಾಗಿತ್ತು. ಹಾಗಾಗಿ ಈಕೆಯ ಪ್ರಿಯಕರ ಸಂತೋಷ್ಗೆ ತಂದೆ ತಾಯಿ ಇಲ್ಲದ ಕಾರಣ ಆತನ ಚಿಕ್ಕಪ್ಪ ಹಾಗೂ ಚಿಕ್ಕಮ್ಮ ಬಾಲಕಿಯ ಮನೆಗೆ ಬಂದು ಮದುವೆ ಮಾಡಿ ಕೊಡುವಂತೆ ಕೇಳಿದ್ದರು.
ಅಂತೆಯೇ ಇಬ್ಬರ ಮದುವೆ ಜುಲೈ 31 ರಂದು ಮದುವೆ ನಡೆದಿತ್ತು. ಪ್ರಕರಣ ಸಂಬಂಧ ಮದುವೆ ಮಾಡಿದ ಬಾಲಕಿಯ ತಂದೆ, ತಾಯಿ, ಸಂತೋಷನ ಚಿಕ್ಕಪ್ಪ, ಚಿಕ್ಕಮ್ಮ, ಮದುವೆ ಮಾಡಿದ ಪುರೋಹಿತರು, ಅಡುಗೆ ಭಟ್ಟ, ಲಗ್ನಪತ್ರಿಕೆ ಮುದ್ರಿಸಿದ ಪ್ರಿಂಟರ್ಸ್, ಇಬ್ಬರು ಪೋಟೋಗ್ರಾಫರ್ ಮೇಲೆ ಈಗ ಎಫ್ಐಆರ್ ದಾಖಲಾಗಿದೆ.