ಪುಂಜಾಲಕಟ್ಟೆ: ಯುವ ವಕೀಲರಾದ ಕುಲದೀಪ್ ಶೆಟ್ಟಿ ಅವರನ್ನು ಜಾಗದ ತಕರಾರಿನಲ್ಲಿ ಪೊಲೀಸರು ಠಾಣೆಗೆ ಎಳೆದೊಯ್ದು ಹಲ್ಲೆ ನಡೆಸಿದಲ್ಲದೇ , ಮನೆಗೆ ನುಗ್ಗಿ ಮನೆಯವರ ಮೇಲೂ ಕೈ ಮಾಡಲು ಪ್ರಯತ್ನಿಸಿದೆ ಎಂಬ ಆರೋಪವು ಕೇಳಿ ಬಂದಿದ್ದು, ಈ ಘಟನೆಯನ್ನು ಜಿಲ್ಲಾ ವಕೀಲರ ಸಂಘ ತೀವ್ರವಾಗಿ ಖಂಡಿಸಿ, ಪೊಲೀಸ್ ಅಧಿಕಾರಿಯ ಅಮಾನತಿನ ಆಗ್ರಹದೊಂದಿಗೆ ಪ್ರತಿಭಟನೆಗೆ ಸಿದ್ಧತೆ ನಡೆಸಿದೆ.
ಘಟನೆ ವಿವರ:
ಮಂಗಳೂರಿನ ಯುವ ವಕೀಲ ಕುಲದೀಪ್ ಶೆಟ್ಟಿ ಎಂಬವರ ಜಾಗದ ವಿಚಾರದಲ್ಲಿ ತಗಾದೆವೊಂದು ನಡೆದು ಬಳಿಕ ಠಾಣೆಯ ಮೆಟ್ಟಿಲೇರಿತ್ತು ಎನ್ನಲಾಗಿದೆ. ಈ ವಿಷಯ ರಾಜಕೀಯವಾಗಿ ಮುಂದುವರಿದಿದ್ದು, ವಕೀಲರ ವಿರುದ್ಧ ರಾಜಕೀಯ ನಾಯಕರುಗಳು ಪೊಲೀಸರಿಗೆ ಒತ್ತಡ ಹೇರಿದರು ಎನ್ನಲಾಗಿದೆ.
ಪುಂಜಾಲಕಟ್ಟೆ ಠಾಣಾಧಿಕಾರಿ ರಾತ್ರೋ ರಾತ್ರಿ ವಕೀಲ ಕುಲದೀಪ್ ಶೆಟ್ಟಿ ಅವರ ಮನೆಗೆ ನುಗ್ಗಿ ಮನೆಯವರನ್ನು ದೂಡಿ ಹಾಕಿ ಗೂಂಡಾಗಿರಿ ನಡೆಸಿ, ಮನೆಮಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕುಲದೀಪ್ ಓರ್ವ ವಕೀಲ ಎನ್ನುವ ಗೌರವವನ್ನೂ ಕೂಡಾ ನೀಡದ ಕಾಲರ್ಪಟ್ಟಿ ಹಿಡಿದು ಠಾಣೆಗೆ ಎಳೆದೊಯ್ಯು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಪೊಲೀಸರ ದೌರ್ಜನ್ಯಕ್ಕೊಳಗಾದ ವಕೀಲರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ವಕೀಲರ ಸಂಘವು ಘಟನೆಯನ್ನು ತೀವ್ರವಾಗಿ ಖಂಡಿಸಿದಲ್ಲದೆ, ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಯನ್ನು ಕೂಡಲೇ ಕರ್ತವ್ಯದಿಂದ ಅಮಾನತುಗೊಳಿಸಿ ಕಾನೂನು ಕ್ರಮ ಜರುಗಿಸಬೇಕು. ಪೊಲೀಸರು ವಕೀಲರ ಮೇಲೆ ನಿರಂತರ ದೌರ್ಜನ್ಯವೆಸಗುತ್ತಿದ್ದು, ಸಮಾಜದಲ್ಲಿ ಗೌರವಯುತವಾಗಿ ವೃತ್ತಿ ಜೀವನ ನಡೆಸಲು ಅಸಾಧ್ಯವಾಗುತ್ತಿದೆ. ಜಿಲ್ಲೆಯ ಎಲ್ಲಾ ವಕೀಲರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿ ದೌರ್ಜನ್ಯ ನಡೆಯದಂತೆ ಕೈ ಜೋಡಿಸಬೇಕು. ಇಲ್ಲದಿದ್ದಾರೆ ಪೊಲೀಸರ ದಬ್ಬಾಳಿಕೆಗೆ ಕೊನೆ ಇಲ್ಲದಂತಾಗುತ್ತದೆ. ಆದಷ್ಟು ಬೇಗ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿ ಕಾನೂನು ಕ್ರಮ ಜರಗಿಸಬೇಕು ಎಂಬ ಆಗ್ರಹದೊಂದಿಗೆ ವಕೀಲ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.