ಪುತ್ತೂರು: ಅಕ್ರಮ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪುತ್ತೂರು ಠಾಣಾ ಪೊಲೀಸರು ಕಾರ್ಯಾಚರಣೆಯಲ್ಲಿ ಮೂಲಕ ಬಂಧಿಸಿ ಸಾವಿರಾರು ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡ ಘಟನೆ ಮುಕ್ರಂಪಾಡಿಯ ಬಸ್ಸು ತಂಗುದಾಣದಲ್ಲಿ ನಡೆದಿದೆ.
ಬಲ್ನಾಡು ಗ್ರಾಮದ ಬುಳ್ಳೇರಿಕಟ್ಟೆ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಇಕ್ಬಾಲ್ ಪಿ ಯಾನೆ ಇಕ್ಕು (35) ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ 40 ಸಾವಿರ ರೂ. ಮೌಲ್ಯದ 1.020 ಕೆ.ಜಿತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಪುತ್ತೂರು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಕ್ರಂಪಾಡಿ ಬಸ್ಸು ನಿಲ್ದಾಣವೊಂದರಲ್ಲಿ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ಬಳಿ ಇಟ್ಟುಕೊಂಡಿದ್ದ ಎನ್ನಲಾಗಿದೆ.
ಜಿಲ್ಲಾ ಎಸ್ಪಿ ಮತ್ತು ಎಡಿಷನಲ್ ಎಸ್ಪಿ ಹಾಗೂ ಡಿವೈಎಸ್ಪಿ ಮಾರ್ಗದರ್ಶನದಲ್ಲಿ, ಪುತ್ತೂರು ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಮತ್ತು ಎಸ್.ಐ ಶ್ರೀ ಕಾಂತ್, ರಾಥೋಡ್ ಅವರ ನೇತೃತ್ವದಲ್ಲಿ ಎ.ಎಸ್ ಐಲೋಕನಾಥ್, ಹೆಡ್ಕಾನ್ಸ್ಟೇ ಬಲ್ ಸ್ಕರಿಯ, ಉದಯ, ಪ್ರಶಾಂತ್ ರೈ, ಜಗದೀಶ್, ಸುಬ್ರಹ್ಮಣ್ಯ , ಸಿಬ್ಬಂದಿಗಳಾದ ರೇವತಿ, ಶ್ರೀಮಂತ್ ಅವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮುಕ್ರಂಪಾಡಿಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯ ಚೀಲವನ್ನು ಪರಿಶೀಲನೆ ನಡೆಸಿದಾಗ ಚೀಲದ ಒಳಗೆ ಒಂದು ಪ್ಲಾಸ್ಟಿಕ್ ಕವರಿನಲ್ಲಿ ಗಾಂಜಾದ ಒಣಗಿದ ಹೂ, ಎಲೆ, ಮೊಗ್ಗು ಮತ್ತು ಬೀಜಗಳು ಇರುವುದು ಕಂಡುಬಂದಿದ್ದು , ದುರುವಾಸನೆಯಿಂದ ಮಾದಕ ವಸ್ತು ಗಾಂಜಾ ಎಂದು ಖಚಿತ ಪಡಿಸಿದ ನಂತರ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.