ಪುತ್ತೂರು : ದರ್ಬೆ ವೃತ್ತದ ಬಳಿಯಿಂದ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಹಿತೈಷಿಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಚುನಾವಣಾಧಿಕಾರಿ ಗಿರೀಶ್ ನಂದನ್ ಅವರಿಗೆ ನಾಮಪತ್ರ ಸಲ್ಲಿಸಿದರು.
ದರ್ಬೆ ವೃತ್ತದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಗೆ ಹಾರಾರ್ಪಣೆ ಮಾಡಿ ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕೊಂಬು, ಕಹಳೆ, ಕಲ್ಲಡ್ಕ ಗೊಂಬೆ, ನಾಸಿಕ್ ಬ್ಯಾಂಡ್, ಹುಲಿವೇಷ ಮೆರವಣಿಗೆಗೆ ಮೆರುಗು ನೀಡಿತು.
ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಸಭಾಕಾರ್ಯಕ್ರಮ ನಡೆಯಿತು. ಈ ವೇಳೆ ಮುಖ್ಯ ಭಾಷಣಕಾರರಾಗಿ ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹ ಮೂರ್ತಿ, ಮಂಜುನಾಥ ಭಂಡಾರಿ ಮಾತನಾಡಿದರು.
ಈ ವೇಳೆ ಮಾತನಾಡಿದ ಅಶೋಕ್ ರೈ, ಹಿರಿಯ ನಾಯಕರ ಮಾತುಗಳನ್ನು ಹೃದಯದಲ್ಲಿ ಇಟ್ಟಿದ್ದೇನೆ. ಅದಕ್ಕೆ ಕೊರತೆಯಾಗದಂತೆ ನಡೆದುಕೊಳ್ಳುತ್ತೇನೆ. ಟಿಕೆಟ್ ಆಕಾಂಕ್ಷಿಗಳು ಎಲ್ಲಾ ಒಟ್ಟು ಸೇರಿ ಇಂದು ಕೈಜೋಡಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಕಾರ್ಯಕರ್ತರಿಗೆ ನೋವು ಆಗದಂತೆ ನಡೆದುಕೊಳ್ಳಬೇಕು. ಕಾಂಗ್ರೆಸ್ ಕಾರ್ಯಕರ್ತರು ನನ್ನ ಬಂಧುಗಳು. ಶಕುಂತಳಾ ಶೆಟ್ಟಿ ಅವರು ಯಾವ ರೀತಿ ಮಾರ್ಗದರ್ಶನ ಕೊಡುತ್ತೀರೋ ಅದರಂತೆ ನಡೆದುಕೊಂಡು ಹೋಗುತ್ತೇನೆ. ಹತ್ತು ವರ್ಷಗಳಿಂದ ಸಮಾಜ ಸೇವೆ ಮಾಡಿಕೊಂಡು ಬಂದಿದ್ದೇನೆ. ಸಕಲ ಧರ್ಮೀಯರಿಗೆ ತನ್ನಿಂದಾದ ಸಹಾಯ ಮಾಡಿದ್ದೇನೆ. ಜನರು ಆಶೀರ್ವಾದ ಮಾಡಬೇಕು. ಯಾವುದೇ ಚುನಾವಣೆ ಬರಲಿ ನಿಮ್ಮ ಆಸೆ, ಆಕಾಂಕ್ಷೆಗೆ ಧಕ್ಕೆ ಬರದಂತೆ ಕೆಲಸ ಮಾಡಿ ತೋರಿಸುತ್ತೇನೆ. ಒಂದೇ ತಾಯಿ ಮಕ್ಕಳಂತೆ ಕೆಲಸ ಮಾಡುವ ಎಂದು ಹೇಳಿದರು.
ವೇದಿಕೆಯಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಮ್ ಬಿ ವಿಶ್ವನಾಥ್ ಡ್ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಲಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಬಿ ರಾಜರಾಮ್, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದರು.