ಪುತ್ತೂರು: ವ್ಯಕ್ತಿಯೋರ್ವರು ಕ್ಷುಲ್ಲಕ ಕಾರಣಕ್ಕೆ ಬಸ್ ನಿರ್ವಾಹಕನಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಪುತ್ತೂರು ಠಾಣೆಗೆ ದೂರು ನೀಡಿರುವ ಘಟನೆ ನಡೆದಿದೆ.
ಧರ್ಮಸ್ಥಳ ಕೆಎಸ್ಆರ್ಟಿಸಿ ಘಟಕದ ಚಾಲಕ ಕಂ ನಿರ್ವಾಹಕರಾದ ಬಾಗಲಕೋಟೆ ಮೂಲದ ತುಳಸಿಗೇರಿ ಮನಾದಗಿ (39) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ನಿರ್ವಾಹಕ ನೀಡಿದ ದೂರಿನಂತೆ ಆರೋಪಿ ಮಹಮ್ಮದ್ ಸಲಾಂ ವಿರುದ್ದ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎಸ್ಆರ್ಟಿಸಿ ಬಸ್ ಗಾಳಿಮುಖದಿಂದ ಹೊರಟು ಮಧ್ಯಾಹ್ನ ವೇಳೆಗೆ ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ತಲುಪಿದಾಗ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಜನರು ಇಳಿಯುತ್ತಿದ್ದಾಗ ವ್ಯಕ್ತಿಯೋರ್ವರು ಏಕಾಏಕಿಯಾಗಿ ಬಸ್ಸನ್ನು ಹತ್ತಲು ಪ್ರಯತ್ನಿಸಿದನು. ಆಗ ನಿರ್ವಾಹಕ ಏರುತ್ತಿದ್ದ ವ್ಯಕ್ತಿಯನ್ನು ತಡೆದು ಪ್ರಯಾಣಿಕರು ಇಳಿದ ಬಳಿಕ ಬಸ್ ಏರುವಂತೆ ತಿಳಿಸಿದ್ದು, ಈ ವೇಳೆ ಕೋಪಗೊಂಡ ಆರೋಪಿ ಮಹಮ್ಮದ್ ಸಲಾಂ ನಿರ್ವಾಹಕನ ಮುಖಕ್ಕೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದುದಲ್ಲದೆ ಸಮವಸ್ತ್ರದ ಕಾಲರ್ ಹಿಡಿದು ತೊಡೆಗಳಿಗೆ ಕಾಲಿನಿಂದ ಒದ್ದು ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ