
ವಿಟ್ಲ: ಅನುಮಾನಾಸ್ಪದವಾಗಿ ನಿಂತಿದ್ದ ಕಾರನ್ನು ಪರಿಶೀಲಿಸಿದ ವೇಳೆ ನಾಲ್ವರು ಗಾಂಜಾ ಸೇವಿಸಿರುವುದು ಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ಕಾನತ್ತಡ್ಕದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಆ.9ರಂದು ಸಂಜೆ ಕಾನತ್ತಡ್ಕ ಪ್ರದೇಶದಲ್ಲಿ ಕಾರೊಂದು ಅನುಮಾನಾಸ್ಪದವಾಗಿ ಕಂಡುಬರುತ್ತಿರುವುದಾಗಿ ವಿಟ್ಲ ಠಾಣಾ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಅವರಿಗೆ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ನಾಗರಾಜ ಕೆ. (32) ಎಂಬಾತನ ಮನೆಯ ಅಂಗಳದಲ್ಲಿ KA-17-N-7443 ನೋಂದಣಿ ಸಂಖ್ಯೆಯ ಕಾರೊಂದು ಕಂಡುಬಂದಿದೆ.
ಪೊಲೀಸರು ಸ್ಥಳಕ್ಕೆ ತೆರಳಿದಾಗ ಮನೆಯ ಜಗಲಿಯಲ್ಲಿ ನಾಲ್ವರು ವ್ಯಕ್ತಿಗಳು ಕುಳಿತಿರುವುದು ಕಂಡುಬಂದಿದೆ. ವಿಚಾರಣೆ ನಡೆಸಿದಾಗ ಮನೆಯ ಮಾಲಿಕ ನಾಗರಾಜ ಕೆ. (32), ಬಂಟ್ವಾಳ ಕೊಳ್ನಾಡು ನಿವಾಸಿ ಕುಮಾರ್ ಕೃಷ್ಣ (27), ಬಂಟ್ವಾಳ ಕೇಪು ನಿವಾಸಿ ಅಬ್ದುಲ್ ಜಲೀಲ್ (40) ಹಾಗೂ ವಿಟ್ಲ ಕಸಬಾ ನಿವಾಸಿ ಅಬ್ದುಲ್ ಖಾದರ್ ಯು. (31) ಎಂದು ತಿಳಿದುಬಂದಿದೆ.
ಪೊಲೀಸರ ವಿಚಾರಣೆ ವೇಳೆ ನಾಲ್ವರು ಆರೋಪಿಗಳು ಕಾರಿನಲ್ಲಿ ಗಾಂಜಾ ತಂದು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಬಳಿಕ ನಾಲ್ವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮಾದಕವಸ್ತು ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 173/2026ರಂತೆ NDPS Act, 1985ರ ಕಲಂ 27(b) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಗಾಂಜಾವನ್ನು ಎಲ್ಲಿಂದ ತರಲಾಗಿತ್ತು ಹಾಗೂ ಪ್ರಕರಣದಲ್ಲಿ ಇನ್ನಿತರರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ








