ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸರು ಇತ್ತೀಚಿಗೆ ಶಾಂತಿಗೋಡು ಗ್ರಾಮದ ವೀರಮಂಗಲದಲ್ಲಿ ಕಾರ್ಯಚರಣೆ ನಡೆಸಿ ಗಾಂಜಾವನ್ನು ಇರಿಸಿಕೊಂಡಿದ್ದವರನ್ನು ಬಂಧಿಸಿದ್ದರು. ಈ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದೆ. ಬಂಧಿತ ಆರೋಪಿಗಳನ್ನು ವಿಚಾರಣೆ ಮಾಡುವಾಗ ಗಾಂಜಾ ಸರಬರಾಜುದಾರನ ಹೆಸರನ್ನು ಬಹಿರಂಗಗೊಳಿಸಿದ್ದಾರೆ. ಗಾಂಜಾ ಸರಬರಾಜುದಾರರನನ್ನೂ ಕೂಡ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ವಿಟ್ಲ ಮೂಲದ ಗಾಂಜಾ ಸಪ್ಲೈಯರ್
ಬಂಧಿತ ಆರೋಪಿಗಳ ವಿಚಾರಣೆ ವೇಳೆ ಗಾಂಜಾ ಸರಬರಾಜುದಾರ ಆರೋಪಿ ವಿಟ್ಲ ಕುಂಡಡ್ಕ ನಿವಾಸಿ ಇಬ್ರಾಹಿಂ ಅವರ ಪುತ್ರ ಮಹಮ್ಮದ್ ಮುವಾಝ್(೩೦ವ) ಎಂಬವರನ್ನು ಮೇ ೨೨ರಂದು ಸಂಜೆ ವೇಳೆ ಕೆದಿಲ ಗ್ರಾಮದ ಪೇರಮೊಗ್ರು ಎಂಬಲ್ಲಿ ಬಂಧಿಸಿ ಆತನಿಂದ ಪಿಸ್ತೂಲ್, ಸಜೀವ ಗುಂಡು, ಕಾರು, ಗಾಂಜಾ ಸೇರಿದಂತೆ ಸುಮಾರು ರೂ. ೫.೮೬ ಲಕ್ಷ ಮೌಲ್ಯ ದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವೀರಮಂಗಲ ರೈಲ್ವೇ ಹಳಿಗಳ ಸಮೀಪ ಬ್ಯಾಗ್ ಅನ್ನು ಹಿಡಿದುಕೊಂಡು ನಿಂತಿದ್ದ ಕಡಬ ತಾಲೂಕಿನ ಕುಂತೂರು ಪೆರಾಬೆ ಗ್ರಾಮದ ಕೋಚಕಟ್ಟೆ ಉಮ್ಮರಬ್ಬ ಎಂಬವರ ಪುತ್ರ ಶಫೀಕ್ ಕೆ.ವಿ(೨೪ವ) ಮತ್ತು ಕುಂತೂರು ಎರ್ಮಲ ನಿವಾಸಿ ಅಬ್ದುಲ್ಲ ಎಂಬವರ ಪುತ್ರ ರಾಝೀಕ್(೨೮ವ)ನನ್ನು ವಿಚಾರಿಸಿದ ಪೊಲೀಸರಿಗೆ ಅವರ ಬಳಿ ಗಾಂಜಾ ಇರುವುದು ಬೆಳಕಿಗೆ ಬಂದಿದೆ.
ಪೊಲೀಸರ ಬಲೆಗೆ ಬಿದ್ದ ಮಹಮ್ಮದ್ ಮುವಾಝ್!
ಇವರಿಬ್ಬರನ್ನು ಬಂಧಿಸಿ ವಿಚಾರಿಸಿದಾಗ ಅವರ ಸ್ನೇಹಿತ ವಿಟ್ಲದ ಕುಂಡಡ್ಕ ಶಾಂತಿಮಾರು ನಿವಾಸಿ ಮಹಮ್ಮದ್ ಮುವಾಝ್(೩೦ವ) ಅವರು ಗಾಂಜಾ ಸರಬರಾಜು ಮಾಡುವ ಕುರಿತು ತಿಳಿಸಿದ್ದರು. ಮಹಮ್ಮದ್ ಮುವಾಝ್ ಮಂಗಳೂರಿನಿಂದ ಗಾಂಜಾಮಾರಾಟ ಮಾಡಿಕೊಂಡು ಕಾರಿನಲ್ಲಿ ಬರುತ್ತಿದ್ದಂತೆ ಅವನನ್ನು ಬಂಧಿತ ಆರೋಪಿಗಳ ಮೂಲಕ ಸ್ಥಳಕ್ಕೆ ಬರುವಂತೆ ಪೊಲೀಸರು ಮೊದಲೇ ಪ್ಲಾನ್ ಮಾಡಿಕೊಂಡಿದ್ದಾರೆ. ನಂತರ ಕೆದಿಲ ಗ್ರಾಮದ ಪೇರಮೊಗ್ರು ಸಮೀಪ ಬರುವಂತೆ ಹೇಳಿದ್ದಾರೆ. ಈ ವೇಳೆ ಗಾಂಜಾ ಸಪ್ಲೈಯರ್ ಮಹಮ್ಮದ್ ಮುವಾಝ್ ಕಾರನ್ನು ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಬಂಧಿಸಿದ್ದಾರೆ.
ಪಿಸ್ತೂಲ್, ಸಜೀವ ಗುಂಡು, ಕಾರು, ಗಾಂಜಾ ಸೇರಿದಂತೆ ರೂ. ೫.೮೬ ಲಕ್ಷದ ಸೊತ್ತು ವಶಪಡಿಸಿಕೊಂಡಿದ್ದಾರೆ. ಆರೋಪಿ ಮಹಮ್ಮ ದ್ ಮುವಾಝ್ ಅವರನ್ನು ಬಂಧಿಸಿದ ಬಳಿಕ ಆತನ ಪ್ಯಾಂಟ್ ಕಿಸೆಯನ್ನು ಪರಿಶೀಲಿಸಿದಾಗ ಪರವಾನಿಗೆ ಇಲ್ಲದ ರೂ. ೫೦ಸಾವಿರ ಮೌಲ್ಯದ ಪಿಸ್ತೂಲ್ ಮತ್ತು ಎರಡು ಸಜೀವ ಗುಂಡುಗಳು, ಕಾರನ್ನು ಪರಿಶೀಲಿಸಿದಾಗ ಕಾರಿನ ಡಿಕ್ಕಿಯಲ್ಲಿ ೨.೦೭೫ ಕೆ.ಜಿ ಗಾಂಜಾ, ಗಾಂಜಾ ತುಂಬಿದ ೫೦ ಗ್ರಾಂ ತೂಕದ ೫ ಪ್ಯಾಕೆಟ್, ರೂ. ೩೩೦ ನಗದು, ಪಾನ್ ಕಾರ್ಡ್, ಜಗದೀಶ್ ಪ್ರಸಾದ್ ಎಂಬವರ ಬ್ಯಾಂಕ್ ಆಫ್ ಬರೋಡದ ಎಟಿಎಂ ಕಾರ್ಡ್, ೧೦ ಕರ್ಣಾಟಕ ಬ್ಯಾಂಕ್ ನ ಎಟಿಎಂ ಕಾರ್ಡ್, ಹೊಟೇಲ್ ಸಾಯಿ ಸಿದ್ದಾರ್ಥ ಲಾಡ್ಜ್ ನ ವಿಸಿಟಿಂಗ್ ಕಾರ್ಡ್, ಸ್ಟೀಲ್ ಸ್ಟಿಕ್, ರೂ. ೫ಸಾವಿರ ಮೌಲ್ಯದ ಮೊಬೈಲ್ ಪೋನ್ ಗಳು ,ಪಿಸ್ತೂಲ್ ಮಾದರಿಯ ಸಿಗರ್ ಲೈಟ್, ಮಾತ್ರೆಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಹುಂಡೈ ಐ ೨೦ ಕಾರು ಸೇರಿದಂತೆ ಒಟ್ಟು ರೂ. ೫,೮೬,೫೩೦ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.