ಪುತ್ತೂರು: 2019ರ ಸೆಪ್ಟೆಂಬರ್ 3 ರಂದು ರಾತ್ರಿ ಹಿಂ.ಜಾ.ವೇ ಪುತ್ತೂರು ತಾಲೂಕು ಕಾರ್ಯದರ್ಶಿ, ಸಂಪ್ಯ ಮೇರ್ಲ ನಿವಾಸಿ ಕಾರ್ತಿಕ್ ಸುವರ್ಣ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಸಂಪ್ಯ ನಿವಾಸಿ ಚರಣ್ರಾಜ್ ರೈ(29ವ)ಯವರನ್ನು ಪೆರ್ಲಂಪಾಡಿಯ ರಸ್ತೆ ಬದಿಯಲ್ಲಿ ಕೊಚ್ಚಿ ಕೊಲೆ ಮಾಡಿದ ಘಟನೆಯಲ್ಲಿ ಪ್ರಮುಖ ಆರೋಪಿಯಾಗಿರುವ ರೌಡಿಶೀಟರ್ ಕಿಶೋರ್ ಪೂಜಾರಿ ಜತೆ ಈಶ್ವರ ಮಂಗಲದ ರಾಕೇಶ್ ಪಂಚೋಡಿ ಮತ್ತು ಬಲ್ನಾಡಿನ ರೆಮಂತ್ ಎಂಬವರನ್ನೂ ಪೊಲೀಸರು ಕೆಡವಿದ್ದಾರೆ.
ಚರಣ್ರಾಜ್ ರೈ ಕೊಲೆ ಪ್ರಕರಣದ ಹಂತಕರನ್ನು ಬಂಧಿಸಲು ರಚಿಸಲಾಗಿರುವ ವಿಶೇಷ ತನಿಖಾ ತಂಡದಲ್ಲಿರುವ ಪುತ್ತೂರು ಗ್ರಾಮಾಂತರ, ಸುಳ್ಯ ಮತ್ತು ಬೆಳ್ಳಾರೆ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಕೊಲೆ ಪ್ರಕರಣದ ಎಲ್ಲಾ ಆರು ಆರೋಪಿಗಳನ್ನು ಬಲೆಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.
ಕಿಶೋರ್ ಕುಮಾರ್ ಕಲ್ಲಡ್ಕರವರ ಆಪ್ತ ಒಡನಾಡಿ, ಸಂಬಂಧಿಕನೂ ಆಗಿದ್ದ ಮೇರ್ಲ ಕುಟುಂಬದ ಕಾರ್ತಿಕ್ ಸುವರ್ಣರ ಕೊಲೆಗೆ ಪ್ರತಿಯಾಗಿ ದ್ವೇಷದಿಂದ ಚರಣ್ ರಾಜ್ ರೈಯವರನ್ನು ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಹುತೇಕ ಖಚಿತವಾಗಿದೆ. ಚರಣ್ ರಾಜ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ, ಪೊಲೀಸರ ವಶವಾಗಿರುವ ರೌಡಿಶೀಟರ್ ಕಿಶೋರ್ ಪೂಜಾರಿ ಮೂಲತಃ ಬಂಟ್ವಾಳ ತಾಲೂಕಿನ ಕಲ್ಲಡ್ಕ ನಿವಾಸಿಯಾಗಿದ್ದು, ಬೆಂಗಳೂರು ಮತ್ತು ದರ್ಬೆಯಲ್ಲಿ ಬಟ್ಟೆ ಶಾಪ್ ಹೊಂದಿದ್ದರು.
ಕಿಶೋರ್ ಪೂಜಾರಿ ಮತ್ತು ಆತನ ಐವರು ಸಹಚರರು ಕೆಲವು ತಿಂಗಳ ಹಿಂದೆ ದರ್ಬೆಯಲ್ಲಿ ನಡೆದಿದ್ದ ತಾರಿಗುಡ್ಡೆಯ ರಾಧಾಕೃಷ್ಣ ಪೂಜಾರಿ ಎಂಬವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದವರು ಜಾಮೀನಿನಲ್ಲಿ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದರು. ಕಾರ್ತಿಕ್ ಸುವರ್ಣ ಕೊಲೆ ಬಳಿಕ ಪ್ರತೀಕಾರದ ಪ್ರತಿಜ್ಞೆ ಮಾಡಿದ್ದರೆನ್ನಲಾದ ಕಿಶೋರ್ ಪೂಜಾರಿ ಕಲ್ಲಡ್ಕ ಮತ್ತು ಆತನ ಸಹಚರರು ಹಾಡಹಗಲೇ ಚರಣ್ ರಾಜ್ ನ್ನು ಹತ್ಯೆಮಾಡಿದ್ದಾರೆ. ಈ ಮೂಲಕ ರಿವೇಂಜ್ ಮರ್ಡರ್ ಗೆ ಸಾಕ್ಷಿಯಾಗಿದೆ.
ಚರಣ್ ರಾಜ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಕೆಯ್ಯರು ನೂಜಿ ಮುತ್ತಪ್ಪ ರೈ ಪುತ್ರ ನರ್ಮೇಶ್ ರೈ (೨೯ ವ), ಕೆಯ್ಯರು ಗ್ರಾಮದ ಮಾಡಾವು ನಿವಾಸಿ ಯತೀಶ ಎಂಬವರ ಪುತ್ರ ನಿತಿಲ್ ಶೆಟ್ಟಿ (೨೩ವ.) ಹಾಗೂ ಕಡಬ ತಾಲೂಕಿನ ಬೆಳಂದೂರು ಮಠಕಲ ನಿವಾಸಿ ರಾಮ ಎಂಬವರ ಪುತ್ರ ವಿಜೇಶ್ (೨೨ವ.) ಎಂಬವರನ್ನು ಪೊಲೀಸರು ಕೆಯ್ಯರು ಗ್ರಾಮದ ಪಲ್ಲತ್ತಡ್ಕದಲ್ಲಿರುವ ಗೇರುಬೀಜದ ಕಾಡಿನಲ್ಲಿ ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಅವರು ನೀಡಿದ ಮಾಹಿತಿಯ ಆಧಾರದಲ್ಲಿ ಕಿಶೋರ್ ಪೂಜಾರಿ ಕಲ್ಲಡ್ಕ, ರಾಕೇಶ್ ಪಂಚೋಡಿ ಮತ್ತು ರೆಮಂತ್ ಬಲ್ನಾಡು ಪೊಲೀಸ್ ವಶವಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕೊಲೆ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೊನಾವಣೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ಮತ್ತು ಡಿವೈಎಸ್ಪಿ ಡಾ. ಗಾನಾ ಪಿ. ಕುಮಾರ್ ಅವರ ನೇತೃತ್ವದಲ್ಲಿ ಸುಳ್ಯ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಬೆಳ್ಳಾರೆ ಪೊಲೀಸ್ ಠಾಣೆಯ ಎಸ್.ಐ ರುಕ್ಮ ನಾಯ್ಕ್ ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಉದಯರವಿ ಅವರ ತಂಡ ರಚಿಸಲಾಗಿತ್ತು. ವಿಶೇಷ ತನಿಖಾ ತಂಡ ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚೌತಿಯ ರಾತ್ರಿಯಂದು ನೆತ್ತರು ಹರಿಸಿದವ ಹಾಡಹಗಲೇ ಕೊಲೆಯಾದ..!