ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಸಮಯದಲ್ಲಿ ದೇವಸ್ಥಾನದ ಜಾಗದಲ್ಲಿ ವ್ಯಾಪಾರಸ್ಥರರು ದುಬಾರಿ ಸುಂಕ ವಿಧಿಸುವ ಬಗ್ಗೆ ಕೆ.ಪ್ರಭಾಕರ್ ಸಾಲ್ಯಾನ್ ಬಾಕಿಲಗುತ್ತು ವಿರೋಧ ವ್ಯಕ್ತ ಪಡಿಸಿದ್ದು, ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ನೀಡಿದ್ದಾರೆ.
ಪುತ್ತೂರು ದೇವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ ಅಂಗಡಿ ಹಾಕುವವರು ಬಡವರಾಗಿದ್ದು, ಶ್ರೀಮಂತರಾಗಿರುವುದಿಲ್ಲ. ಆದರೂ ದೇವಸ್ಥಾನದ ವತಿಯಿಂದ ಅಂಗಡಿ ಹಾಕಲು ಸ್ಥಳ ದುಬಾರಿ ಹಣಕ್ಕೆ ಹರಾಜು ಮಾಡುತ್ತಾರೆ. ಅದಲ್ಲದೇ ಕೆಲವು ಏಜೆಂಟ್ಗಳು ದೇವಸ್ಥಾನದಿಂದ ಕಡಿಮೆ ಬೆಲೆಗೆ ತೆಗೆದುಕೊಂಡು ದುಬಾರಿ ಬೆಲೆಗೆ ಮಾರಾಟ ಮಾಡುತ್ತಾರೆ. ದುಬಾರಿ ಬೆಲೆ ಕೊಟ್ಟು ಅಂಗಡಿ ಹಾಕುವವರು ಸಾಮಾನುಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡಿ ದೇವಸ್ಥಾನದ ಜಾತ್ರೋತ್ಸವಕ್ಕೆ ಬಂದಂತಹ ಭಕ್ತರಿಗೆ ಮತ್ತು ಯಾತ್ರಾರ್ಥಿಗಳಿಗೆ ಪುತ್ತೂರು ಜಾತ್ರೆ ದುಬಾರಿ ಜಾತ್ರೆಯಾಗಿ ಪರಿಣಮಿಸಿದೆ.
ಆದರಿಂದ ದೇವಸ್ಥಾನದ ವತಿಯಿಂದ ಅಂಗಡಿ ಮಾಡುವವರಿಗೆ ಜಾತ್ರೆಯ ಏಲಂ ಮಾಡುವಾಗ ಯಾವುದೇ ಏಜೆಂಟ್ಗಳಿಗೆ ಕೊಡುವುದು ಮತ್ತು ದುಬಾರಿ ಬೆಲೆಗೆ ಏಲಂ ಮಾಡುವುದಕ್ಕೆ ನಮ್ಮ ವಿರೋಧವಿದೆ. ದೇವಸ್ಥಾನದ ಜಾತ್ರೋತ್ಸವಕ್ಕೆ ಬೇಕಾದ ಆದಾಯ ಹುಂಡಿಯಿಂದಲೇ ಬರುವುದರಿಂದ ಅಂಗಡಿ ಮಾಡುವವರಿಗೆ ಕಡಿಮೆ ಬೆಲೆಗೆ ಜಾಗವನ್ನು ಕೊಟ್ಟು ಮಾರಾಟಗಾರರು ದುಬಾರಿ ಬೆಲೆಗೆ ಮಾರಾಟ ಮಾಡದ ಹಾಗೆ ಆಡಳಿತ ಸಮಿತಿ ಮತ್ತು ಕಾರ್ಯ ನಿರ್ವಹಣಾಧಿಕಾರಿ ಸೂಕ್ತ ಕ್ರಮವನ್ನು ಕೈಗೊಂಡು ಜಾತ್ರೋತ್ಸವಕ್ಕೆ ಬಂದಂತಹ ಎಲ್ಲಾ ಭಕ್ತರಿಗೆ ತೃಪ್ತಿಯಾಗುವ ಹಾಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.