ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಷನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ಇದರ ದಶ ಸಂಭ್ರಮ ಕಾರ್ಯಕ್ರಮ ಪುತ್ತೂರು ಕಿಲ್ಲೆ ಮೈದಾನದಲ್ಲಿ ದಾಖಲೆಯ ಜನಸಂಖ್ಯೆಯೊಂದಿಗೆ ಬಹಳ ಅದ್ದೂರಿಯಾಗಿ ನಡೆಯಿತು.
ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಇವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಶೋಕ್ ರೈ ಕೋಡಿಂಬಾಡಿ, ಅಧ್ಯಕ್ಷರು ರೈ ಎಸ್ಟೇಟ್ ಎಜ್ಯುಕೇಷನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರು ಶುಭ ಆಶೀರ್ವಚನ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬೆಳ್ಳಿಪ್ಪಾಡಿ ರಮಾನಾಥ ರೈ, ಮಾಜಿ ಸಚಿವರು ಕರ್ನಾಟಕ ಸರಕಾರ, ಶಕುಂತಳಾ ಟಿ.ಶೆಟ್ಟಿ ಮಾಜಿ ಶಾಸಕಿ ಪುತ್ತೂರು, ಜಯಂತ ನಡುಬೈಲು, ರೆ. ಫಾಧರ್ ಲಾರೆನ್ಸ್ ಮಾಸ್ಕರೇನಾನ್ಸ್, ಧರ್ಮಗುರು ಮಾಯಿದೆ ದೇವುಸ್ ಚರ್ಚ್ ಪುತ್ತೂರು, ಹುಸೈನ್ ರೆಂಜಾಲಾಡಿ, ಧಾರ್ಮಿಕ ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ರೈಯವರು ನಡೆದು ಬಂದ 22 ವರ್ಷದ ಯಶಸ್ವಿ ಉದ್ಯಮ ಕ್ಷೇತ್ರ ಹಾಗೂ 10 ವರ್ಷದ ದಶ ಸಂಭ್ರಮದ ಸಾಧನೆಯ ಹಾದಿಯ ಕುರಿತಾದ ಧರ್ಮಾತ್ಮ.. ಬಡವರ ಬೆಳಕು ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಧಾರ್ಮಿಕ ಕ್ಷೇತ್ರ ,ಸಾಂಸ್ಕೃತಿಕ ಕ್ಷೇತ್ರ ,ಸಮಾಜ ಮುಖಿ ಕ್ಷೇತ್ರ, ಕೃಷಿ ಕ್ಷೇತ್ರ, ಕಾರ್ಮಿಕ ವರ್ಗ ಹೀಗೆ ಹಲವು ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಸುಮಾರು 39 ಗ್ರಾಮೀಣ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.
ಅಶೋಕ್ ಕುಮಾರ್ ರೈಯವರು ನಡೆದು ಬಂದ ಸಾಧನೆಯ ಹಾದಿಯನ್ನೊಳಗೊಂಡ ಧರ್ಮಾತ್ಮ ಕೃತಿಗೆ ಸಂಪಾದಕತ್ವ ವಹಿಸಿದ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರರಾದ ಸಂತೋಷ್ ಕುಮಾರ್ ಶಾಂತಿನಗರ ಹಾಗೂ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಜತಿಂದ್ರ ಶೆಟ್ಟಿ ಹಾಗೂ ಜಯಪ್ರಕಾಶ್ ಬದಿನಾರು ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಂದರ್ಭದಲ್ಲಿ ರೈ ಎಸ್ಟೇಟ್ ಎಜ್ಯುಕೇಷನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಇದರ ನೇತಾರ ಬಡವರ ಕಣ್ಮಣಿ ಸುಮಾ ಅಶೋಕ್ ಕುಮಾರ್ ರೈ ದಂಪತಿಯನ್ನು ಜನಮೆಚ್ಚುಗೆಯ ಮೇರೆಗೆ ಶ್ರೇಷ್ಠ ಸಮಾಜ ಸೇವಾ ಸಾಧಕ ಎಂಬ ಧ್ಯೇಯದೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು.
ಬಳಿಕ ವಸ್ತ್ರದಾನ ಕಾರ್ಯಕ್ರಮ ನಡೆಯಿತು. ಸುಮಾರು 10 ಕೌಂಟರ್ಗಳ ಸುಸಜ್ಜಿತ ವ್ಯವಸ್ಥೆಯೊಂದಿಗೆ ಸುಮಾರು 25,000 ಜನರಿಗೆ ವಸ್ತ್ರದಾನ ವಿತರಣೆ ಮಾಡಲಾಯಿತು. ಮಕ್ಕಳಿಗೆ ಶಾಲು, ಮಹಿಳೆಯರಿಗೆ ಸೀರೆ, ಪುರುಷರಿಗೆ ಪಂಚೆ ನೀಡಲಾಯಿತು. ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ನೀರೀಕ್ಷೆಗೂ ಮೀರಿದ ಜನಸಂದಣಿಯನ್ನೊಳಗೊಂಡ ರೈ ಎಸ್ಟೇಟ್ ಎಜ್ಯುಕೇಷನಲ್ &ಚಾರಿಟೇಬಲ್ ಟ್ರಸ್ಟ್ (ರಿ) ದಶಸಂಭ್ರಮ ಕಾರ್ಯಕ್ರಮ ದಾಖಲೆ ಮೆರೆದಿದೆ.