ಪುತ್ತೂರು: ನಡೆದುಕೊಂಡು ಹೋಗುತ್ತಿದ್ದ ವೇಳೆ ಬುಲೆಟ್ ನಲ್ಲಿ ಬಂದ ಆರೋಪಿಗಳಿಬ್ಬರು “ಅಕ್ಕಾ ಅಕ್ಕಾ ” ಎಂದು ಕರೆದು ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಎಳೆದೊಯ್ದು ಪರಾರಿಯಾದ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರತ್ನ ಎಂಬುವವರು ಬೆಳಿಗ್ಗೆ 10.30 ಗಂಟೆಗೆ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಕೋನಡ್ಕ ಎಂಬಲ್ಲಿಂದ ಮನೆಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ರೆಂಜ ಕಡೆಯಿಂದ ಚೂರಿಪದವು ಕಡೆಗೆ ಹೋಗುತ್ತಿದ್ದ ಕೆಂಪು ಬಣ್ಣದ ಬುಲೆಟ್ ಮುಂದೆ ಹೋಗಿ ಏಕಾಏಕಿ ಟರ್ನ್ ಹೊಡೆದು ಇವರ ಬಳಿ ಬಂದು ನಿಂತು “ಅಕ್ಕಾ ಅಕ್ಕಾ ” ಎಂದು ಕರೆದು ಅದರಲ್ಲಿದ್ದ ಸಹಸವಾರ ಏಕಾಏಕಿ ಕುತ್ತಿಗೆಗೆ ಕೈ ಹಾಕಿ ಚಿನ್ನದ ಕರಿಮಣಿ ಸರ ಎಳೆದಿದ್ದಾನೆ.
ಆಗ ರತ್ನ ಜೋರಾಗಿ ಬೊಬ್ಬೆ ಹಾಕಿ ತನ್ನ ಕರಿಮಣಿ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಆತ ಬಲವಾಗಿ ಎಳೆದ ಪರಿಣಾಮ ಚಿನ್ನದ ಕರಿಮಣಿ ಸರ ತುಂಡಾಗಿ ಅದರ ಅರ್ಧ ಭಾಗ ರತ್ನ ಬಳಿ ಉಳಿದು ಮತ್ತರ್ಧ ಆತ ಎಳೆದುಕೊಂಡು ಪರಾರಿಯಾಗಿದ್ದಾನೆ.
ಚಿನ್ನದ ಕರಿಮಣಿ ಸರವು ಒಟ್ಟು ಸುಮಾರು 26 ಗ್ರಾಂ ಚಿನ್ನವನ್ನು ಹೊಂದಿದ್ದು, ಆ ಪೈಕಿ ಸುಮಾರು 11 ಗ್ರಾಂ ಚಿನ್ನ ವನ್ನು ಸದ್ರಿ ವ್ಯ ಕ್ತಿಯು ಸುಲಿಗೆ ಮಾಡಿಕೊಂಡು ಹೋಗಿದ್ದು , ಸುಲಿಗೆ ಮಾಡಿರುವ ಚಿನ್ನ ದ ಅಂದಾಜು ಮೌಲ್ಯ ರೂಪಾಯಿ 50 ಸಾವಿರ ಎಂದು ಅಂ ದಾಜಿಸಲಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.